ADVERTISEMENT

ಅನ್ನದಾತರ ನಿದ್ದೆಗೆಡಿಸಿದ ಅಂಗಮಾರಿ

ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆ: ತೋಟಗಾರಿಕೆ ಬೆಳೆಗಳಿಗೆ ರೋಗಬಾಧೆ

ಜೆ.ಆರ್.ಗಿರೀಶ್
Published 12 ಅಕ್ಟೋಬರ್ 2021, 16:02 IST
Last Updated 12 ಅಕ್ಟೋಬರ್ 2021, 16:02 IST
ಕೋಲಾರ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಅಂಗಮಾರಿ ರೋಗಕ್ಕೆ ತುತ್ತಾಗಿರುವ ಟೊಮೆಟೊ ಬೆಳೆ
ಕೋಲಾರ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಅಂಗಮಾರಿ ರೋಗಕ್ಕೆ ತುತ್ತಾಗಿರುವ ಟೊಮೆಟೊ ಬೆಳೆ   

ಕೋಲಾರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯಲ್ಲಿ ಅಂಗಮಾರಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ.

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಕಳೆದೊಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೊ ಬೆಳೆಯಲ್ಲಿ ಕೊನೆಯ ಅಂಗಮಾರಿ ರೋಗ ಕಾಣಿಸಿಕೊಂಡಿದೆ.

ADVERTISEMENT

ಬಹುತೇಕ ತಾಲ್ಲೂಕುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗಮಾರಿ ರೋಗಬಾಧಿತ ಗಿಡದ ಕಾಂಡ, ಹಣ್ಣಿನ ತೊಟ್ಟು, ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಬೆಳೆ ನಾಶವಾಗುತ್ತಿದೆ. ಕಾಯಿಗಳ ಮೇಲೆ ಕಪ್ಪು ಚುಕ್ಕಿಗಳಾಗಿದ್ದು, ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.

ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಗಿಡದ ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಲಾಕ್‌ಡೌನ್‌ ವೇಳೆ ಸರಕು ಸಾಗಣೆ ಸೇವೆ ಸ್ಥಗಿತಗೊಂಡು ಮತ್ತು ಬೆಲೆ ಕುಸಿತವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಇದೀಗ ಅಂಗಮಾರಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ.

ಟೊಮೆಟೊ ಜತೆಗೆ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ, ದಪ್ಪ ಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬು ರೋಗ, ಕುಂಬಳ ಕಾಯಿ, ಸೌತೆಕಾಯಿ, ಹಾಗಲಕಾಯಿ, ಹೀರೇಕಾಯಿ ಬೆಳೆಯಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಸೀಬೆಯಲ್ಲಿ ಹಣ್ಣು ಕೊಳೆ ರೋಗ ಶುರುವಾಗಿದೆ.

ಹತೋಟಿಗೆ ಬರುತ್ತಿಲ್ಲ: ರೈತರು ಟೊಮೆಟೊ ಬೆಳೆಗೆ ವಿವಿಧ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದುವರಿದರೆ ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.