
ಕೋಲಾರ: ಹುತ್ತೂರು ಹೋಬಳಿ ಭಾಗದ ನಿವೇಶನ ರಹಿತರಿಗೆ ಆರು ತಿಂಗಳಲ್ಲಿ 1,300 ನಿವೇಶನ ವಿತರಿಸಲಾಗುವುದು. ಪ್ರತಿ ಪಂಚಾಯಿತಿಗೆ 300 ನಿವೇಶನ ಕೊಡುತ್ತೇನೆ. ಯಾರೂ ಸೂರು ವಂಚಿತರಾಗಬಾರದು ಎಂದು ಬಂಗಾರಪೇಟೆ ಶಾಸಕ ಹಾಗೂ ಕೆಯುಐಡಿಎಫ್ಸಿ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹುತ್ತೂರು ಹೋಬಳಿಯ ವಡಗೂರು ಸಂತೆ ಮೈದಾನದಲ್ಲಿ ಗುರುವಾರ ಬಂಗಾರಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ₹ 32 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
₹ 32 ಕೋಟಿ ಅನುದಾನದಲ್ಲಿ ಈ ಭಾಗದ ಎಲ್ಲಾ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಹುತ್ತೂರು ಹೋಬಳಿಯ ಸಮಗ್ರ ಅಭಿವೃದ್ಧಿಯ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ₹ 10 ಕೋಟಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಜನರ ಮಧ್ಯೆ ನಿಂತು ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುವವರೇ ನಿಜವಾದ ನಾಯಕರು. ವೇದಿಕೆಯಲ್ಲಿ ಬಂದು ಭಾಷಣ ಮಾಡುವವರು ನಾಯಕರಲ್ಲ. 13 ವರ್ಷಗಳಿಂದ ಶಾಸಕನಾಗಿ ನೀಡಿದ ಮಾತಿನಂತೆ ನಾನು ನಡೆದುಕೊಂಡು ಬಂದಿದ್ದೇನೆ. ಹಿಂದೆ ಗ್ರಾಮದಲ್ಲಿ ನೀರಿಗೆ ಎಷ್ಟು ಕಷ್ಟ ಇತ್ತು? ಈಗ ಹೇಗಿದೆ? ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಕಿಸಿಕೊಟ್ಟಿದ್ದೇನೆ. ಪ್ರತಿ ಗ್ರಾಮಕ್ಕೂ ಹೈಮಾಸ್ಟ್ ದೀಪ ಅಳವಡಿಸಿದ್ದೇನೆ ಎಂದರು.
ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ನೀಡಿದ್ದರು. ಈ ಅವಧಿಯಲ್ಲಿ ಗ್ಯಾರಂಟಿ ನೀಡಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ನಾವು ಬದ್ಧ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಶಾಸಕರು ಅತಿ ಹೆಚ್ಚು ಅನುದಾನ ತಂದಿದ್ದಾರೆ. ನಾನೂ ಹಿಂದೆ ಈ ಕ್ಷೇತ್ರದಲ್ಲಿ ಶಾಸಕನಾಗಿದ್ದೆ. ಆಗಿನ ಲಭಿಸಿದ್ದಕ್ಕಿಂತ ಹೆಚ್ಚು ಅನುದಾನ ಸಿಕ್ಕಿದೆ. ಮುಂದೆ ತಾಲ್ಲೂಕು, ಜಿಲ್ಲಾ, ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ. ಕೆಲಸ ಮಾಡಿದರೆ ಜನ ಕೈಹಿಡಿಯುತ್ತಾರೆ’ ಎಂದರು.
ಹುತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ ಮಾತನಾಡಿ, ‘ಹುತ್ತೂರು ಹೋಬಳಿಯಲ್ಲಿ ಶಾಸಕರು ಶಕ್ತಿಮೀರಿ ಅನುದಾನ ತಂದು ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಹಿಂದೆ ಹೋಬಳಿಗೆ ಯಾವ ಶಾಸಕರೂ ಇಷ್ಟು ಅನುದಾನ ತಂದಿಲ್ಲ. ಡಾಂಬರೀಕರಣಕ್ಕೆ ಹೆಚ್ಚು ಅನುದಾನ ನೀಡಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಆರಂಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ನಡೆದು, ನಂತರ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದ್ದ ಕಾರಣ ವೇದಿಕೆಯ ಬ್ಯಾನರ್ ಬದಲಾಯಿಸಲಾಯಿತು. ಜೊತೆಗೆ ಅಧಿಕಾರಿಗಳು ನಿರ್ಗಮಿಸಿದರು.
ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬಂಗಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಮುನಿರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಘುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಹರಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಂಡಹಳ್ಳಿ ನಾಗಭೂಷಣ ಬಾಬು, ಮುಖಂಡರಾದ ಹರಳಕುಂಟೆ ವೆಂಕಟೇಶ್, ಹೊಳಲಿ ಚಲಪತಿ, ಮೇಡತಂಬಿಹಳ್ಳಿ ರಮೇಶ್, ಬಿಎಂಟಿಸಿ ಬೆಳಗಾನಹಳ್ಳಿ ಮಂಜುನಾಥ್, ಮುರಳಿಗೌಡ, ತಂಬಳ್ಳಿ ಮುನಿಯಪ್ಪ, ಪ್ರತಾಪ್, ಜುಮ್ನಹಳ್ಳಿ ನಾರಾಯಣಸ್ವಾಮಿ ಯರಂಘಟ್ಟ ಮುನಿರಾಜು, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ನಿರ್ಮಿತಿ ಕೇಂದ್ರದ ನಿರ್ದೇಶಕ ಅಶ್ವಿನ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು, ಪಿಡಿಒ ರಮೇಶ್ ಬಾಬು, ಲಕ್ಷ್ಮಿ ಹಾಗೂ ಹುತ್ತೂರು ಹೋಬಳಿಯ ಜನರು ಇದ್ದರು.
ಆನೆ ನಡೆಯುವಾಗ ನಾಯಿ ಬೊಗಳುತ್ತೆ
ಯಾರೇ ಟೀಕಿಸಿದರೂ ಅದು ನನಗೆ ಒಳ್ಳೆಯದೇ. ಟೀಕಾಕಾರರು ನಿಂದಕರು ಇರಬೇಕು ವಿರೋಧ ಪಕ್ಷಗಳಿಂದ ಟೀಕೆ ಸಹಜ ಅದನ್ನು ನಾನು ಸಲಹೆಯಂತೆ ಸ್ವೀಕರಿಸುತ್ತೇನೆ. ಹೆಚ್ಚು ಪ್ರಸಿದ್ಧಿ ಪಡೆದಂತೆ ಹೆಚ್ಚು ಶತ್ರುಗಳು ಕಾಣಿಸಿಕೊಳ್ಳುತ್ತಾರೆ. ಆನೆ ನಡೆಯುವಾಗ ನಾಯಿ ಬೊಗಳುತ್ತದೆ. ಆನೆ ತನ್ನ ಪಾಡಿಗೆ ನಡೆದು ಹೋಗುತ್ತದೆ. ಟೀಕೇಗಳು ಸಾಯುತ್ತವೆ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಎಸ್.ಎನ್.ನಾರಾಯಣಸ್ವಾಮಿ ಟೀಕಾಕಾರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ವೇದಿಕೆಯಲ್ಲಿ ವರ್ತೂರು ಬೆಂಬಲಿಗ
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾಜಿ ಸಚಿವ ವರ್ತೂರು ಪ್ರಕಾಶ್ ಬೆಂಬಲಿಗರೂ ಆಗಿರುವ ತಂಬಳ್ಳಿ ಮುನಿಯಪ್ಪ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಸಭೆಯಲ್ಲಿ ಘೋಷಿಸಿದರು. ಈ ವೇಳೆ ಹಲವರು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರಿದರು. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್ ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.