ADVERTISEMENT

ನಿರ್ಗತಿಕರ ಕೂಗಿಗೆ ಸ್ಪಂದಿಸಿ: ಪ್ರಧಾನ ಸಿವಿಲ್ ನ್ಯಾಯಾಧೀಶ ದಯಾನಂದಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 16:41 IST
Last Updated 1 ಏಪ್ರಿಲ್ 2020, 16:41 IST
ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ದಯಾನಂದಮೂರ್ತಿ ಅವರು ಕೊರೊನಾ ಸೋಂಕು ತಡೆ ಕುರಿತು ಜಾಗೃತಿ ಮೂಡಿಸಿದರು
ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ದಯಾನಂದಮೂರ್ತಿ ಅವರು ಕೊರೊನಾ ಸೋಂಕು ತಡೆ ಕುರಿತು ಜಾಗೃತಿ ಮೂಡಿಸಿದರು   

ಬಂಗಾರಪೇಟೆ: ಲಾಕ್‌ಡೌನ್‌ನಿಂದ ತಾಲ್ಲೂಕಿನಲ್ಲಿ ಬಡವರು, ನಿರ್ಗತಿಕರು ಹಸಿವಿನಿಂದ ಬಳಲದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ದಯಾನಂದಮೂರ್ತಿ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ನ್ಯಾಯಾಂಗ ಇಲಾಖೆ, ಕಾನೂನು ಸೇವಾ ಸಮಿತಿ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ಸೋಂಕು ಕುರಿತಾದ ಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣದಲ್ಲಿ ಕೆಲ ಕುಟುಂಬ ಒಪ್ಪತ್ತಿನ ಊಟಕ್ಕಾಗಿ ಆ ದಿನದ ಕೂಲಿಯನ್ನೇ ಅವಲಂಬಿಸಿವೆ. 8 ದಿನದಿಂದ ಬಂದ್‌ ಇರುವುದರಿಂದ ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥ ಸಿಕ್ಕಿರುವುದಿಲ್ಲ. ಅಂತಹ ಕುಟುಂಬಗಳನ್ನು ಪತ್ತೆ ಮಾಡಿ, ಸಹಾಯ ಹಸ್ತ ನೀಡಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ADVERTISEMENT

ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಮಾತನಾಡಿ, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಂಘ ಸಂಸ್ಥೆಗಳು ನಿತ್ಯ ಆಹಾರ ಪೂರೈಕೆ ಮಾಡುತ್ತಿವೆ. ಲಾಕ್‌ಡೌನ್‌ ಮುಗಿಯುವವರೆಗೂ ಆಹಾರ ನೀಡುವುದಾಗಿ ಸಂಸ್ಥೆಗಳು ಭರವಸೆ ನೀಡಿವೆ. ಜತೆಗೆ ಪಡಿತರ ಧಾನ್ಯ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಪಟ್ಟಣದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಪುರಸಭೆ ನೌಕರರು, ಕಾರ್ಮಿಕರಿಗೆ ಮುಖಗವಸು, ಕೈಗವಸು, ಸ್ಯಾನಿಟೈಸರ್ ನೀಡಲಾಗಿದೆ. ಜತೆಗೆ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶ ದೀಪು, ವಕೀಲರ ಸಂಘದ ಅಧ್ಯಕ್ಷ ಎಸ್.ರಾಜಗೋಪಾಲ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ, ಸರ್ಕಲ್ ಇನ್‌ಸ್ಪೆಕ್ಟರ್‌ ಶ್ರೀಕಂಠ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರಿ, ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ವಕೀಲರಾದ ಜಯಪ್ರಕಾಶ್, ಕೆ.ಸಿ.ಪ್ರಸಾದ್, ಆರ್.ವಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.