ಬಂಗಾರಪೇಟೆ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕ ಮಹಿಳೆಯನ್ನು ಮರು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಜಮೀರ್ ಪಾಷಾ (30) ಅಸ್ಸಾಂನ ಗುವಾಹಟಿಯ ಹಿಂದೂ ವಿವಾಹಿತೆ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದೆ. ಪರಿಚಯ ಇಬ್ಬರ ನಡುವೆ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇಬ್ಬರ ನಡುವೆ ಎರಡ್ಮೂರು ವರ್ಷದಿಂದ ಪ್ರೇಮ ಪ್ರಸಂಗ ನಡೆದಿದೆ. ಆ ಸಲುಗೆಯಿಂದ ಜಮೀರ್ ಪಾಷಾ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದಾರೆ. ಮತ್ತೆ ವಾಪಸ್ ಸಹ ನೀಡಿದ್ದ ಎನ್ನಲಾಗಿದೆ.
ನಂತರ ಜಮೀರ್ ಪಾಷಾ ಮಹಿಳೆಯನ್ನು ಮರು ಮದುವೆಯಾಗುವುದಾಗಿ ನಂಬಿಸಿ ಕೆಲ ತಿಂಗಳ ಹಿಂದೆ ₹16 ಲಕ್ಷ ಪಡೆದಿದ್ದಾನೆ. ಮಹಿಳೆಯೂ ಆಗಾಗ ಜಮೀರ್ ಪಾಷಾ ಮನೆಗೆ ಬಂದು ಹೋಗುತ್ತಿದ್ದಳು. ಕಳೆದ ತಿಂಗಳಿಂದ ಜಮೀರ್ ಪಾಷಾ ಅವರೊಂದಿಗೆ ಮದುವೆಯಾಗಲು ಮಹಿಳೆ ಮನೆ ಬಿಟ್ಟು ಬಂದು, ಅವರೊಂದಿಗೆ ವಾಸವಾಗಿದ್ದಳು. ಜಮೀರ್ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ವಿವಾಹವಾಗಲು ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಮಹಿಳೆ ₹16 ಲಕ್ಷ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾಳೆ. ಇದರಿಂದ ಗಲಾಟೆ ನಡೆದು ಜಮೀರ್ ಪಾಷಾ ಮಹಿಳೆಯನ್ನು ಮನೆಯಲ್ಲಿ ಕೂಡಿ ಹಾಕಿ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ್ದಾನೆ.
ಮಹಿಳೆ ಬುಧವಾರ ರಾತ್ರಿ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ಜಮೀರ್ ಪಾಷ ವಿರುದ್ಧ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಮೀರ್ ಪಾಷ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಸದ್ಯ ಮಹಿಳೆಯನ್ನು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.