ADVERTISEMENT

46 ಅಭ್ಯರ್ಥಿಗಳಿಗೆ ಚಿನ್ನದ ಪದಕ

ಬೆಂಗಳೂರು ಉತ್ತರ ವಿ.ವಿ ಘಟಿಕೋತ್ಸವ ನಾಳೆ; 23,126 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 18:33 IST
Last Updated 30 ಜುಲೈ 2025, 18:33 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌.ಲೋಕನಾಥ್‌ ಮಾತನಾಡಿದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌.ಲೋಕನಾಥ್‌ ಮಾತನಾಡಿದರು   

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಐದನೇ ವರ್ಷದ ವಾರ್ಷಿಕ ಘಟಿಕೋತ್ಸವ ಆಗಸ್ಟ್‌ 1ರ ಶುಕ್ರವಾರ ನಡೆಯಲಿದ್ದು, ವಿವಿಧ ವಿಭಾಗಗಳಲ್ಲಿ ರ‍್ಯಾಂಕ್‌ ಗಳಿಸಿರುವ 46 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಒಟ್ಟು 23,1266 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

ನಗರ ಹೊರವಲಯದ ಟಮಕದಲ್ಲಿರುವ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌.ಲೋಕನಾಥ್‌ ತಿಳಿಸಿದರು.

‘ಘಟಿಕೋತ್ಸವವು ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ‌. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಘಟಿಕೋತ್ಸವ ಭಾಷಣ ಮಾಡುವವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಸ್ನಾತಕೋತ್ತರ (ಪಿಜಿ) ವಿಭಾಗದಲ್ಲಿ 26 ವಿದ್ಯಾರ್ಥಿಗಳು, ಸ್ನಾತಕ (ಯುಜಿ) ವಿಭಾಗದಲ್ಲಿ 18 ವಿದ್ಯಾರ್ಥಿಗಳು, ಬಿ.ಇಡಿ ಹಾಗೂ ಬಿಪಿ.ಇಡಿ ವಿಭಾಗದಲ್ಲಿ ತಲಾ ಒಬ್ಬರು ರ‍್ಯಾಂಕ್‌ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ 12,550, ಸ್ನಾತಕೋತ್ತರ ವಿಭಾಗದಲ್ಲಿ 3,993, ಬಿ.ಎಡ್‌ ಹಾಗೂ ಬಿಪಿ.ಎಡ್ ವಿಭಾಗದಲ್ಲಿ 2,505, ಪಿಜಿ ಡಿಪ್ಲೋಮಾ ಕೋರ್ಸ್‌ನ 9 ಹಾಗೂ ಸ್ವಾಯತ್ತ ಕಾಲೇಜುಗಳ 4,069 ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ 23,126 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ’ ಎಂದು ವಿವರಿಸಿದರು.

ಚಿನ್ನದ ಪದಕಗಳಲ್ಲಿ ಒಂದನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವೇಣುಗೋಪಾಲ್, ಸಿಂಡಿಕೇಟ್ ಸದಸ್ಯ ರವೀಶ್ 5 ಚಿನ್ನದ ಪದಕ, ಆಕ್ಸ್‌ಫರ್ಡ್ ಸಂಸ್ಥೆ ಚೇರ್ಮನ್ ನರಸಿಂಹರಾಜು ತಮ್ಮ ತಂದೆಯ ಹೆಸರಲ್ಲಿ 1 ಚಿನ್ನದ ಪದಕ ಪ್ರಾಯೋಜಕತ್ವ ವಹಿಸಿದ್ದಾರೆ. ಉಳಿದವನ್ನು ವಿಶ್ವವಿದ್ಯಾಲಯದಿಂದ ನೀಡಲಾಗುತ್ತಿದೆ ಎಂದರು.

‘ಅವ್ಯವಹಾರ ನಡೆದಿದ್ದರೆ ನೇಣಿಗೆ ಹಾಕಿ’

‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನನ್ನ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ನಾನಿನ್ನೂ 4 ತಿಂಗಳು ಕುಲಪತಿಯಾಗಿ ಇಲ್ಲಿಯೇ ಇರುತ್ತೇನೆ. ಅಂತಹ ಯಾವುದೇ ಅವ್ಯವಹಾರ ನಡೆದಿರುವುದು ಸಾಬೀತಾದರೆ ನನ್ನನ್ನು ಕೋಲಾರದಲ್ಲಿ ನೇಣಿಗೆ ಹಾಕಿ’ ಎಂದು ಪ್ರೊ.ನಿರಂಜನ ವಾನಳ್ಳಿ ಸವಾಲು ಹಾಕಿದರು. ‘ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರನ್ನು ಒಳಗೊಂಡ ಸಮಿತಿ ಶಿಫಾರಸ್ಸಿನಂತೆ ಪತ್ರಿಕೋದ್ಯಮ ವಿಭಾಗವನ್ನು ಈ ಸಾಲಿನಲ್ಲಿ ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳ ಕೊರತೆಯೇ ಇದಕ್ಕೆ ಕಾರಣ. ಇದ್ದ ವಿದ್ಯಾರ್ಥಿಗಳು ತರಗತಿಗೆ ಬಂದಿಲ್ಲ. ವಿದ್ಯಾವಿಷಯಕ ಪರಿಷತ್ ಮತ್ತು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಕೂಡ ಪಡೆಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.