ADVERTISEMENT

ತೆರಿಗೆ ಹಣದ ಲೂಟಿಕೋರರ ವಿರುದ್ಧ ಬುಲ್ಡೋಜರ್ ಸಂಸ್ಕೃತಿ ತನ್ನಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 14:35 IST
Last Updated 21 ಏಪ್ರಿಲ್ 2022, 14:35 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಲೂಟಿ ಆಗುತ್ತಿದೆ. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಬುಲ್ಡೋಜರ್ ಸಂಸ್ಕೃತಿ ತನ್ನಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಸಿವು ನೀಗಿಸಿಕೊಳ್ಳಲು ರಸ್ತೆ ಬದಿ ಶೆಡ್ ಹಾಕಿಕೊಂಡಿರುತ್ತಾರೆ. ಅಂತಹವರ ಹೊಟ್ಟೆ ಮೇಲೆ ಒಡೆದರೆ ಬಡವರು ಎಲ್ಲಿಗೆ ಹೋಗಬೇಕು. ಶ್ರಮಿಕರ ಮೇಲೆ ಬುಲ್ಡೋಜರ್ ಸಂಸ್ಕೃತಿ ತಂದರೆ ಒಳ್ಳೆಯದಾಗಲ್ಲ’ ಎಂದರು.

‘ಸರ್ಕಾರ ಲೋಟಿಕೋರರಿಗೆ ರೆಡ್‌ ಕಾರ್ಪೆಟ್ ಹಾಕಿ ಅವರು ಕೇಳಿದಕ್ಕೆಲ್ಲಾ ರುಜು ಹಾಕುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿವೆ. ಬಿಜೆಪಿಯ ಸಹೋದರ ಸಂಸ್ಥೆಗಳು ಕೋಮು ಸಂಘರ್ಷ ಸೃಷ್ಟಿಸುತ್ತಿವೆ. ಸಮಾಜ ಒಡೆಯುವ ಕೆಲಸ ಮಾಡದೆ ಬೆಲೆ ಏರಿಕೆ ಬಗ್ಗೆ ಚರ್ಚಿಸಿದರೆ ನಮ್ಮ ಬೆಂಬಲವಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಜನರ ಕಷ್ಟಕ್ಕೆ ಸ್ಪಂದಿಸದೆ ಧರ್ಮದ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಬೆಂಕಿ ಹಚ್ಚುತ್ತಿದೆ. ಕಾಂಗ್ರೆಸ್‌ ಈ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದೆ. ನಾನು ಕೇಳಿರುವ 4 ಪ್ರಶ್ನೆಗಳಿಗೆ ಖಂಡಿತ ಉತ್ತರ ಬರೋದಿಲ್ಲ. ಅದಕ್ಕೆ ಅವರ ಬಳಿ ಉತ್ತರ ಇಲ್ಲ ಬಿಡಿ’ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ಶೇ 40 ಕಮಿಷನ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆ. ನಾನು ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆ ₹ 25 ಸಾವಿರ ಕೋಟಿಗೆ ಪರ್ಸೆಂಟೇಜ್ ತೆಗೆದುಕೊಂಡಿದ್ದರೆ ₹ 10 ಸಾವಿರ ಕೋಟಿ ಗಳಿಸಬಹುದಿತ್ತು. ಗುತ್ತಿಗೆದಾರರಿಗೆ ಹೇಳಿ ವೋಟಿಗೆ ಐನೂರು ಸಾವಿರ ಕೊಟ್ಟು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಹೇಳಬಹುದಿತ್ತು. ಆದರೆ, ನಾನು ಅಂತಹ ದ್ರೋಹದ ಕೆಲಸ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.