
ಕೋಲಾರ: ದೇಶದ ರಾಜದಾನಿ ನವದೆಹಲಿಯಲ್ಲಿ ಈಚೆಗೆ ನಡೆದ ಎಐ ಸಮಾವೇಶದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಡೂಂಲೈಟ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು.
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರಂಜಿಕಟ್ಟೆ ಹರೀಶ್ ಮಾತನಾಡಿ, ‘ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಭಾರತವನ್ನು ವಿಶ್ವಮಾನವ ಸ್ಥಾನದಲ್ಲಿ ನೋಡುವಂತೆ ಮಾಡಲಾಗಿದೆ’ ಎಂದರು.
ಸುಮಾರು ವರ್ಷಗಳಿಂದ ದೇಶದ ಅಳ್ವಿಕೆ ನಡೆಸಿದ ಕಾಂಗ್ರೆಸ್ಗೆ ಶತ್ರು ರಾಷ್ಟ್ರಗಳೊಂದಿಗೆ ಸ್ನೇಹ ಬೆಳೆಸಿದ್ದೇ ದೊಡ್ಡ ಸಾಧನೆ ಆಗಿದೆ. ಮೋದಿ ಸ್ನೇಹ ರಾಷ್ಟ್ರಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡಿದ್ದಾರೆ. ಜಿಡಿಪಿ ಸುಧಾರಣೆಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಂತೆ ಮಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ಸಿನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರಿಗೆ ದೇಶದ ಯುವಕರೆಲ್ಲ ಸೇರಿ ಪಪ್ಪು ಎಂದು ಹೆಸರಿಟ್ಟಿದ್ದಾರೆ. ಅವರಿಗೆ ಜ್ಞಾನ ಇದ್ದಿದ್ದರೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಎಐ ಸಮಾವೇಶದಲ್ಲಿ ಗಲಾಟೆ ಮಾಡಿಸುತ್ತಿರಲಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇದ್ದು ಅಭಿವೃದ್ಧಿಗೆ ಸಹಕಾರ ನೀಡಬೇಕು, ಅದು ಬಿಟ್ಟು ಅಧಿಕಾರಕ್ಕಾಗಿ ಜಗಳ ಮಾಡಿಸುವುದು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಗಲಭೆ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು,
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಬತನಹಳ್ಳಿ ನವೀನ್ ಮಾತನಾಡಿ, ‘ಸಾರ್ವಜನಿಕ ಸಭೆಗಳ ಮೇಲೆ, ಮೆರವಣಿಗೆಗಳ ಮೇಲೆ ಕಲ್ಲು ಎಸೆಯುವುದು ನಮ್ಮ ಸಂಸ್ಕೃತಿಯಲ್ಲ, ಅದು ಕಾಂಗ್ರೆಸ್ ಸಂಸ್ಕೃತಿ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತಾಕತ್ತಿದ್ದರೆ ಮೋದಿ ಅವರನ್ನು ಭೇಟಿ ಪ್ರಶ್ನೆ ಮಾಡಲಿ’ ಎಂದು ಸವಾಲು ಹಾಕಿದರು.
ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತವಾಗಿ ಮೂರನೇ ಭಾರಿ ಅಧಿಕಾರಕ್ಕೆ ಬಂದಿದೆ. ಜನಪರ ಆಡಳಿತ ನೀಡಿರುವುದಕ್ಕೆ ಜನ ಸತತವಾಗಿ ಆದೇಶ ನೀಡಿದ್ದಾರೆ. ತಮ್ಮ ಪಕ್ಷವನ್ನು ಜನ ಏಕೆ ತಿರಸ್ಕರಿಸಿದ್ದಾರೆ ಎಂಬುದನ್ನು ಕಾಂಗ್ರೆಸ್ನವರೇ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಬಿಂದು ಮಾಧವ್, ಉಪಾಧ್ಯಕ್ಷ ದೀನಾ, ನಗರ ಯುವ ಮೋರ್ಚಾ ಅಧ್ಯಕ್ಷ ಸಾಯಿ ಮೌಳಿ, ಬಾಬು, ಶರತ್, ಕಿರಣ್, ರಾಕೇಶ್, ರವಿ, ಬಿಜೆಪಿ ನಗರ ಅಧ್ಯಕ್ಷ ಸಾಮ ಅನಿಲ್ ಬಾಬು, ಓಬಿಸಿ ಅಧ್ಯಕ್ಷ ನಾಮಲ್ ಮಂಜುನಾಥ್, ಮಾಧ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.