ಕೋಲಾರ: ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎಸ್.ಮುತ್ತುರಾಜ್ ಹಾಗೂ ಸವಿತಾ ಸಮಾಜದ ಮುಖಂಡರು ನಗರದ ಕ್ಷೌರದ ಅಂಗಡಿಗಳಿಗೆ ಗುರುವಾರ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರ ಪರ ಮತ ಯಾಚಿಸಿದರು.
‘ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸವಿತಾ ಸಮಾಜದ ಅಭಿವೃದ್ಧಿಗೆ ಬೆಂಗಳೂರಿನಲ್ಲಿ 1 ಎಕರೆ 20 ಗುಂಟೆ ಜಮೀನು ಮಂಜೂರು ಮಾಡಿದರು. ಅಲ್ಲದೇ, ಸಮುದಾಯಕ್ಕಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದರು’ ಎಂದು ಮುತ್ತುರಾಜ್ ಹೇಳಿದರು.
‘ಸಿದ್ದರಾಮಯ್ಯ ಸಮುದಾಯದ ಏಳಿಗೆಗಾಗಿ ಸಂಗೀತ ಶಾಲೆ ಸ್ಥಾಪನೆ, ಸವಿತಾ ಸಮಾಜಕ್ಕೆ ₹ 25 ಸಾವಿರ ಕೋಟಿ ಅನುದಾನ ಬಿಡುಗಡೆ, ಕ್ಷೌರದಂಗಡಿಗಳಿಗೆ ಸಾಲ, ಅಭಿವೃದ್ಧಿ ನಿಗಮ ಸ್ಥಾಪನೆ, ಸವಿತಾ ಮಹರ್ಷಿ ಜಯಂತಿ, ಕ್ಷೌರಿಕರಿಗೆ ವೃತ್ತಿ ಸಲಕರಣೆ ಕಿಟ್ ವಿತರಣೆ, ಚೇರ್ಗಳ ವಿತರಣೆ ಸೇರಿದಂತೆ ಹಲವು ಸವಲತ್ತು ಕಲ್ಪಿಸಿದರು. ಸವಿತಾ ಸಮಾಜಕ್ಕೆ ನೋವು ಉಂಟು ಮಾಡುತ್ತಿದ್ದ ಹಜಾಮ ಪದ ಬಳಕೆ ನಿಷೇಧಕ್ಕೆ ಹೊಸ ಕಾಯ್ದೆ ಜಾರಿಗೆ ತಂದರು’ ಎಂದು ತಿಳಿಸಿದರು.
‘ಮೈತ್ರಿ ಸರ್ಕಾರವು ಉತ್ತಮ ಆಡಳಿತ ನೀಡುತ್ತಾ ಹಲವು ಜನಪರ ಯೋಜನೆ ಜಾರಿಗೊಳಿಸಿದೆ ಸವಿತಾ ಸಮಾಜದವರು ಈ ಬಾರಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮುನಿಯಪ್ಪ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಸವಿತಾ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಸರ್ವೋದಯ, ಪ್ರಧಾನ ಕಾರ್ಯದರ್ಶಿ ಎಂ.ಗುರುರಾಜ್, ಸದಸ್ಯರಾದ ಎಂ.ಲಕ್ಷ್ಮಿನರಸಿಂಹ, ಧೀರಜ್, ಎಸ್.ಮಂಜುನಾಥ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.