ADVERTISEMENT

ಜಾತಿ ಕಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಿ: ನಿರ್ಮಲಾನಂದನಾಥ ಸ್ವಾಮೀಜಿ

ಜಾತಿ ಜನಗಣತಿ ವೇಳೆ ತಪ್ಪು ಮಾಹಿತಿ ದಾಖಲಾಗದಂತೆ ಎಚ್ಚರ ವಹಿಸಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:24 IST
Last Updated 9 ಸೆಪ್ಟೆಂಬರ್ 2025, 7:24 IST
ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾಜಿಕ, ಆರ್ಥಿಕ ಸಮೀಕ್ಷೆ ಸಂಬಂಧಿಸಿದ ಅರಿವು ಕಾರ್ಯಾಗಾರವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಒಕ್ಕಲಿಗ ಸಮುದಾಯದ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾಜಿಕ, ಆರ್ಥಿಕ ಸಮೀಕ್ಷೆ ಸಂಬಂಧಿಸಿದ ಅರಿವು ಕಾರ್ಯಾಗಾರವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಒಕ್ಕಲಿಗ ಸಮುದಾಯದ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು   

ಕೋಲಾರ: ‘ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವೇಳೆ ಒಕ್ಕಲಿಗ ಸಮುದಾಯದವರು ಜವಾಬ್ದಾರಿ ಹಾಗೂ ವಿವೇಚನೆಯಿಂದ ವಾಸ್ತಾಂಶದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ದಾಖಲಾಗದಂತೆ ಎಚ್ಚರ ವಹಿಸಿ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮುಂಬರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) ಕುರಿತು ನಗರ ಹೊರವಲಯದ ರತ್ನ ಕನ್ವೆನ್ಷನ್‌ ಸಭಾಂಗಣದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅರಿವು ಮೂಡಿಸಲು ಆದಿಚುಂಚನಗಿರಿ ಮಠ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಯಾವುದೇ ಉಪಪಂಗಡಕ್ಕೆ ಸೇರಿದ್ದರೂ ಜಾತಿ ಕಲಂನಲ್ಲಿ ‘ಒಕ್ಕಲಿಗ’ ಎಂದೇ ನಮೂದಿಸಿ. ಉಪಪಂಗಡಗಳನ್ನು ಉಪಜಾತಿ ಕಾಲಂನಲ್ಲಿ ದಾಖಲಿಸಬೇಕು. ಜಾತಿ ಕಾಲಂನಲ್ಲಿ ಉಪಜಾತಿ ನಮೂದಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ರಾಜ್ಯ ಸರ್ಕಾರವು ಹೊಸದಾಗಿ ಸಮೀಕ್ಷೆಯನ್ನು ಸೆ.22ರಿಂದ ಅ.7ರವರೆಗೆ ಅಂದರೆ 15 ದಿನ ನಡೆಸಲಿದೆ. ಇದು ಬರೀ ಜಾತಿ ಜನಗಣತಿ ಅಲ್ಲ; ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. 1931 ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿಯ ನಂತರ ಈಗ ನಡೆಯುತ್ತಿದೆ ಎಂದರು.

ಹಿಂದೆ ಒಮ್ಮೆ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಶೇ 25ರಿಂದ 40ರಷ್ಟು ಮನೆಗಳಿಗೆ ಭೇಟಿ ನೀಡದೆ ವರದಿ ತಯಾರಿಸಲಾಗಿದೆ ಎಂಬ ಆಕ್ಷೇಪ ವ್ಯಕ್ತವಾದ ಕಾರಣ ಅದನ್ನು ಕೈಬಿಟ್ಟು ಈಗ ಹೊಸದಾಗಿ ನಡೆಸಲಾಗುತ್ತಿದೆ. ಹಿಂದೆ ಸಮುದಾಯದಿಂದ ಯಾವುದೇ ಕಾರ್ಯಾಗಾರ ನಡೆದಿರಲಿಲ್ಲ. ಈಗ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಸಮುದಾಯದವರು ಗ್ರಾಮಾಂತರ ಪ್ರದೇಶಕ್ಕೂ ತೆರಳಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪರೀಕ್ಷೆಗೆ ವರ್ಷವಿಡೀ ಓದಿ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದೆ ಇದ್ದರೆ ಅನುತ್ತೀರ್ಣರಾಗುತ್ತೀರಿ. ಹೀಗಾಗಿ, ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸಮೀಕ್ಷೆ ವೇಳೆ ಸರಿಯಾದ ಮಾಹಿತಿ ಕೊಡಿ ಎಂದು ಮನವಿ ಮಾಡಿದರು.

‘ಒಕ್ಕಲಿಗರು ಹಿಂದೆ ಆಶ್ರಯದಾತರು, ಅನ್ನದಾತರಾಗಿದ್ದರು. ಆಗ ಎಲ್ಲರೂ ಒಗ್ಗಟ್ಟಾಗಿದ್ದು, ಸಮಾಜದ ಏಳಿಗೆಗೆ ದುಡಿಯುತ್ತಿದ್ದರು. ಈಗ ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಸಮಾಜ ಉಳಿಯಬೇಕೆಂದರೆ ಸಮುದಾಯದವರು ಒಗ್ಗಟಾಗಿರಬೇಕು. ಸಮುದಾಯಕ್ಕೆ ದಕ್ಕಬೇಕಾದ ಮೀಸಲಾತಿ ಸಿಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ‌ ಸಾಧ್ಯ. ಈಗ ಆ ಕಾಲ ಕೂಡಿ ಬಂದಿದೆ’ ಎಂದರು.

ಕಾರ್ಯಾಗಾರದಲ್ಲಿ ಸೇರಿದ್ದ ಸಮುದಾಯದ ಜನರಿಗೆ ಸಮೀಕ್ಷೆಯ ಬಗ್ಗೆ ಪಿಪಿಟಿ ನೀಡಿದರಲ್ಲದೇ, ಅವರಿಗಿದ್ದ ಅನುಮಾನಗಳನ್ನು ಬಗೆಹರಿಸಲು ಪ್ರಯತ್ನಿಸಿದರು.

ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್‌.ಅನಿಲ್‌ ಕುಮಾರ್, ಜೆಡಿಎಸ್ ಮಹಿಳಾ ಘಟಕ ರಾಜ್ಯ ಅಧ್ಯಕ್ಷೆ ರಶ್ಮಿ ರಾಮೇಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ಡಾ.ಡಿ.ಕೆ.ರಮೇಶ್, ಕೋನಪ್ಪರೆಡ್ಡಿ, ಎಲುವಳ್ಳಿ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಸಮುದಾಯದ ಮುಖಂಡರಾದ ಸಿಎಂಆರ್ ಶ್ರೀನಾಥ್, ಕುರ್ಕಿ ರಾಜೇಶ್ವರಿ, ಸೀಸಂದ್ರ ಗೋಪಾಲಗೌಡ, ವಿ.ಕೃಷ್ಣಾರೆಡ್ಡಿ, ನಾಗರಾಜ್, ಆಡಿಟ್ ನಾಗರಾಜ್, ಮುರಳಿಗೌಡ, ಶಿವಕುಮಾರ್‌, ಲಕ್ಷ್ಮಣಗೌಡ, ಕೆಂಬೋಡಿ ನಾರಾಯಣಸ್ವಾಮಿ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್‌ ಹಾಗೂ ಸಮುದಾಯದ ಮುಖಂಡರು ಇದ್ದರು. 

ಕಾರ್ಯಾಗಾರದಲ್ಲಿ ಒಕ್ಕಲಿಗ ಸಮುದಾಯದವರು ಪಾಲ್ಗೊಂಡಿದ್ದರು 
ಒಕ್ಕಲಿಗರ ಜನಸಂಖ್ಯೆ 1 ಕೋಟಿಗೂ ಅಧಿಕವಿದೆ. ಆದರೆ 61 ಲಕ್ಷ ಎಂಬುದಾಗಿ ತೋರಿಸಲಾಗುತ್ತಿದೆ. ಹೀಗಾಗಿ ಈ ಬಾರಿಯ ಸಮೀಕ್ಷೆಯಲ್ಲಿ ಸಮುದಾಯದವರು ಸರಿಯಾದ ಮಾಹಿತಿ ನೀಡಬೇಕು
ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ

ವಿದ್ಯಾಭ್ಯಾಸ ಸರಿಯಾಗಿ ನಮೂದಿಸಿ

ವಿದ್ಯಾಬ್ಯಾಸ ಜಮೀನು ಆರ್ಥಿಕ ಸ್ಥಿತಿಗತಿ ಬಗ್ಗೆ ಸತ್ಯವಾದ ಮಾಹಿತಿ ನೀಡಬೇಕು. ಉದಾಹರಣೆಗೆ ಪದವಿ ಅಥವಾ ಪಿಯುಸಿಗೆ ಸೇರಿ ಅರ್ಧಕ್ಕೆ ನಿಲ್ಲಿಸಿದ್ದರೆ ಆಗ ವಿದ್ಯಾಬ್ಯಾಸ ಪೂರ್ಣಗೊಳಿಸಿದ ಮಾಹಿತಿ ನೀಡಬೇಕೇ ಹೊರತೂ ಪದವಿ ಆಗಿದೆ ಪಿಯುಸಿ ಆಗಿದೆ ಎಂದಲ್ಲ. ಒಟ್ಟು 10 ಜನರಿದ್ದು ಕುಟುಂಬದಲ್ಲಿ 20 ಎಕರೆ ಜಮೀನಿದ್ದರೆ ಕುಟುಂಬದ 10 ಮಂದಿಗೆ ತಲಾ ಎರಡು ಎಕರೆ ಜಮೀನು ಬರುತ್ತದೆ. ಅದನ್ನು ಬರೆಯಿಸಬೇಕು. ಮುಂದೆ ಸರ್ಕಾರಿ ಸೌಲಭ್ಯ ಸಿಗಬೇಕಿದ್ದರೆ ಸರಿಯಾದ ಮಾಹಿತಿ ನೀಡಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.