ADVERTISEMENT

370ನೇ ವಿಧಿ | ಶತೃ ದೇಶಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ : ಸಚಿವ ಡಾ.ಹರ್ಷವರ್ಧನ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:45 IST
Last Updated 15 ಸೆಪ್ಟೆಂಬರ್ 2019, 19:45 IST

ಕೋಲಾರ: ‘370ನೇ ವಿಧಿ ರದ್ದುಪಡಿಸಿರುವುದರಿಂದ ಕೆಲ ಶತೃ ದೇಶಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ನಗರದಲ್ಲಿ ಭಾನುವಾರ ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮಾತನಾಡಿ, ‘ವಿಧಿ ರದ್ದುಪಡಿಸಿರುವುದರಿಂದ ಒಂದು ದೇಶ, ಒಂದು ಕಾನೂನು ಎಂಬ ಭಾವನೆ ಜನರಲ್ಲಿ ಮೂಡಿದೆ’ ಎಂದು ಅಭಿಪ್ರಾಯಪಟ್ಟರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಮ್ಮು–ಕಾಶ್ಮೀರಕ್ಕೆ 370ನೇ ವಿಧಿಯಲ್ಲಿ ವಿಶೇಷ ಸ್ಥಾನಮಾನ ನೀಡಿದ್ದರು. ಅದನ್ನು ರದ್ದುಪಡಿಸಬೇಕು ಎಂದು ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಹೋರಾಟ ನಡೆಸುತ್ತಿದ್ದರು, ಇದರ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ ಮೋದಿ ಸಂಸತ್‌ನಲ್ಲಿ ಮಂಡಿಸಿ ರದ್ದುಗೊಳಿಸಿದರು’ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯದ ಬಂದು 70 ವರ್ಷಗಳು ಕಳೆದರೂ ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಣಯಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಇಡೀ ದೇಶಕ್ಕೆ ಒಂದು ಕಾನೂನು ಇದ್ದರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಕಾನೂನುಗಳಿದ್ದವು. ಇದರಿಂದಾಗಿ ಅಲ್ಲಿನ ಜನಕ್ಕೆ ಸರ್ಕಾರದ ಯೋಜನೆಗಳು ದೊರೆಯಯುತ್ತಿರಲಿಲ್ಲ’ ಎಂದು ತಿಳಿಸಿದರು.

‘ಇಡಿ ದೇಶಕ್ಕೆ ಒಂದು ಬಾವುಟವಾದರೆ ಜಮ್ಮು ಕಾಶ್ಮೀರಕ್ಕೆ ಒಂದು ಬಾವುಟವಿತ್ತು. ಆದರೀಗ ಇಡೀ ದೇಶಕ್ಕೆ ಒಂದೇ ಬಾವುಟವಿತ್ತು. ಅಲ್ಲಿನ ಭಯೋತ್ಪಾದನೆ, ಉಗ್ರಗಾಮಿಗಳ ಹಾವಳಿ ಹೆಚ್ಚಾಗಿತ್ತು, ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಲು ಅಗುತ್ತಿರಲಿಲ್ಲ, ಬೇರೆ ಕಡೆಯಿಂದ ಹೋದವರು ವಾಸ ಮಾಡಲು ಅವಕಾಶ ಇರಲಿಲ್ಲ. ಈಗ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದಂತಾಗಿದೆ’ ಎಂದು ಸಂತಸವ್ಯಕ್ತಪಡಿಸಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿದ ಬಳಿಕ ಕಾಶ್ಮೀರದಿಂದ ಸಮಾಜ ಘಾತುಕರು ವಾಪಸ್ ತೆರಳಿದ್ದು, ಉಗ್ರಗಾಮಿಗಳು ಹೊರಗೆ ಬರಲು ಹೆದರುತ್ತಿದ್ದಾರೆ. ಇದೀಗ ಅಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.