ಕೋಲಾರ: ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿನ ಪುರಾತನ ಚಂದ್ರಮೌಳೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಯಲ್ಪಾಡುವಿನ ವೆಲ್ಲಾಲ ಸತ್ಯ ನಾರಾಯಣಶಾಸ್ತ್ರಿಯವರು ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ದೇವಾಲಯದ ದ್ವಾರ ಬಾಗಿಲು ಹಾಗೂ 2ನೇ ಬಾಗಿಲಿನ ವಾಸ್ತು, ಗಣೇಶ, ಸುಬ್ರಮಣಿ ಮತ್ತು ಈಶ್ವರ ಲಿಂಗ ಗಮನಿಸಿದರು. ಗರ್ಭ ಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪಿಸುವ ಜಾಗದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಂದ್ರಮೌಳೇಶ್ವರ ದೇವಾಲಯ 1,500 ವರ್ಷಗಳಷ್ಟು ಪುರಾತನವಾದದ್ದು. ಗ್ರಾಮಸ್ಥರು ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ಮಾಗ ಮಾಸದ ಫೆಬ್ರುವರಿ ತಿಂಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಉತ್ತಮ’ ಎಂದು ತಿಳಿಸಿದರು.
‘ದೇವಾಲಯದಲ್ಲಿನ ಶಿಲ್ಪಕಲೆ, ಬರಹ ಗಮನಿಸಿದರೆ ಇದು ಆವಣಿ, ಕುರುಡಮಲೆ ಗಣಪತಿ ದೇವಾಲಯದ ಸಮಕಾಲೀನ ದೇವಾಲಯವಾಗಿದೆ. ಗ್ರಾಮ ಮತ್ತು ಲೋಕ ಕಲ್ಯಾಣಕ್ಕಾಗಿ ನೈಋತ್ಯ ಭಾಗದಲ್ಲಿ ಸ್ಥಾಪನೆ ಮಾಡಲಾಗಿದೆ. 2020ರ ಫೆ.5ರಿಂದ ಮೂರು ದಿನಗಳ ಕಾಲ ವಿಗ್ರಗ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.
‘₹ 4.20 ಲಕ್ಷ ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಗಣೇಶ, ಸುಬ್ರಮಣಿ, ಪಾರ್ವತಿ, ಈಶ್ವರ ಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ದೇವಾಲಯ ನಿರ್ಮಾಣಕ್ಕೆ ಇನ್ನು ₹ 70 ಲಕ್ಷ ಅಗತ್ಯವಿದ್ದು, ದಾನಿಗಳು ನೆರವು ನೀಡಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಂಜುಂಡಗೌಡ ಮನವಿ ಮಾಡಿದರು.
ಗುತ್ತಿಗೆದಾರ ಕೃಷ್ಣಪ್ಪ, ವಕೀಲ ಲೋಕೇಶ್, ಗ್ರಾಮದ ಮುಖಂಡರಾದ ಶ್ರೀನಿವಾಸ್, ಚಿನ್ನಯ್ಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.