ಬಂಗಾರಪೇಟೆ: ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳು ತಮ್ಮ ಪ್ರಾಣ ಲೆಕ್ಕಿಸದೆ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಛಾಪು ಮೂಡಿಸಿದರು ಎಂದು ರಾಷ್ಟ್ರ ಪುರಸ್ಕೃತ ಲೇಖಕ ಡಾ.ಬಾಬು ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ವಿಶ್ವ ಹಿಂದೂ ಪರಿಷತ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಅಭಿಮಾನಿಗಳ ಬಳಗದಿಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ ಅವರ 119ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಬ್ರಿಟಿಷ್ ಆಡಳಿತ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದರು ಮತ್ತು ಸ್ವಾತಂತ್ರ್ಯದ ಜ್ವಾಲೆ ಹಚ್ಚಿಟ್ಟರು ಮತ್ತು ಕ್ರಾಂತಿಕಾರಿಗಳು ಸ್ವಾತಂತ್ರ್ಯ ಚಳವಳಿ ಉಗ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ವಾತಂತ್ರ್ಯಕ್ಕಾಗಿ ಅನೇಕ ಕ್ರಾಂತಿಕಾರಿಗಳು ತಮ್ಮ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಿದರು. ಅವರ ಬಲಿದಾನ ಭಾರತೀಯರಿಗೆ ಪ್ರೇರಣೆ ಎಂದು ತಿಳಿಸಿದರು.
ತಾಲ್ಲೂಕು ದೇವಾಲಯಗಳ ಸಂವರ್ಧನೆ ಸಮಿತಿ ಅಧ್ಯಕ್ಷ ಎಸ್.ಪಿ.ವೆಂಕಟೇಶ್ ಮಾತನಾಡಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಮತ್ತು ಇತರ ಕ್ರಾಂತಿಕಾರಿಗಳು ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿಗಳಾಗಿದ್ದರು. ಅವರ ತ್ಯಾಗ ಮತ್ತು ಹೋರಾಟ ಭಾರತೀಯರಿಗೆ ಸ್ವಾತಂತ್ರ್ಯದ ಹಾದಿ ತೋರಿಸಿತು ಎಂದರು.
ಕೋಲಾರ ಜಿಲ್ಲಾ ವಿ.ಎಚ್.ಪಿ ಅಧ್ಯಕ್ಷ ದಿವಂಗತ ಬಂಗಾರಪೇಟೆ ಎಂ.ಎಸ್.ರಘು ರಾಮರೆಡ್ಡಿ ಮಾತನಾಡಿದರು.
ಶಾಂತಿನಗರ ಉದ್ಯಾನದಲ್ಲಿ ಹಿಂದೆ ನಿರ್ಮಾಣಗೊಂಡಿರುವ ಚಂದ್ರಶೇಖರ್ ಅಜಾದ್ ಪ್ರತಿಮೆ ಅನಾವರಣಗೊಳಿಸಲಾಯಿತು. ಅಖಂಡ ಭಾರತ ಎಂಬ ವಿಷಯ ಮೇಲಿನ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ವಿ ವೇಣುಗೋಪಾಲ್, ಆಜಾದ್ ಪ್ರತಿಮೆ ಕೊಡುಗೆ ದಾನಿ ಹಾಗೂ ಪರಿಸರವಾದಿ ಜನಾರ್ದನರೆಡ್ಡಿ, ಪಾರ್ಥಸಾರಥಿ, ರಾಮಚಂದ್ರಪ್ಪ, ನಾರಾಯಣಸ್ವಾಮಿ, ವಕೀಲ ಜಯಪ್ರಕಾಶ್, ಒಂಬತ್ತುಗುಳಿ ಗ್ರಾ.ಪಂ ಸದಸ್ಯ ವೆಂಕಟೇಶ್ ರೆಡ್ಡಿ, ಸ್ವಸ್ತಿಕ್ ತಿಮ್ಮಾಪುರ ಶಿವು, ಸರಸ್ವತಿ ಮಾತೃ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.