ಕೋಲಾರ: ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲೇ ಸೋಮವಾರ ಮಾರಾಮಾರಿ ನಡೆದಿದೆ.
ನಗರದ ಕದಂಬ ವೈನ್ಸ್ ಸ್ಟೋರ್ ಮಾಲೀಕ ನಾರಾಯಣಸ್ವಾಮಿ ಮತ್ತು ಮಕ್ಕಳು ಹಾಗೂ ಕಠಾರಿಪಾಳ್ಯದ ಅಮರ್ ಮತ್ತು ಬಾಲು ಎಂಬುವರ ಗುಂಪುಗಳ ನಡುವೆ ಕಠಾರಿಪಾಳ್ಯದಲ್ಲಿ ಬೆಳಿಗ್ಗೆ ಜಗಳವಾಗಿತ್ತು. ಬಳಿಕ ನಗರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಜಗಳದಲ್ಲಿ ಗಾಯಗೊಂಡವರನ್ನು ಎಸ್ಎನ್ಆರ್ ಆಸ್ಪತ್ರೆ ಮತ್ತು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು.
ಎಸ್ಎನ್ಆರ್ ಆಸ್ಪತ್ರೆ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಭಯ ಗುಂಪಿನವರು ಮಧ್ಯಾಹ್ನ ಅಲ್ಲಿಯೂ ಮತ್ತೆ ಜಗಳವಾಡಿ ಪರಸ್ಪರ ಕೈ ಮಿಲಾಯಿಸಿದ್ದಾರೆ. ಇದರಿಂದ ವಾರ್ಡ್ನಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿ ಇತರೆ ರೋಗಿಗಳಿಗೆ ಸಮಸ್ಯೆಯಾಯಿತು. ಬಳಿಕ ವೈದ್ಯರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಉಭಯ ಗುಂಪುಗಳನ್ನು ನಿಯಂತ್ರಿಸಿದರು. ಆ ನಂತರ ಪರಿಸ್ಥಿತಿ ತಿಳಿಗೊಂಡಿತು.
ಆಸ್ಪತ್ರೆಯಲ್ಲಿ ನಡೆದ ಘರ್ಷಣೆಯ ದೃಶ್ಯಾವಳಿ ವಾರ್ಡ್ನ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ನಗರ ಠಾಣೆ ಪೊಲೀಸರು ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.