ADVERTISEMENT

ರೈತರ ಹಿತ ರಕ್ಷಣೆಗೆ ಬದ್ಧ- ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 14:55 IST
Last Updated 21 ಜನವರಿ 2022, 14:55 IST
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಶುಕ್ರವಾರ ರಾಸು ಗುಂಪು ವಿಮೆ ಯೋಜನೆ ಪಲಾನುಭವಿಗಳಿಗೆ ಚೆಕ್‌ ವಿತರಿಸಿದರು
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಶುಕ್ರವಾರ ರಾಸು ಗುಂಪು ವಿಮೆ ಯೋಜನೆ ಪಲಾನುಭವಿಗಳಿಗೆ ಚೆಕ್‌ ವಿತರಿಸಿದರು   

ಕೋಲಾರ: ‘ಕೋವಿಡ್ ಸಂಕಷ್ಟದಲ್ಲಿ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ರಾಸುಗಳ ಗುಂಪು ವಿಮೆ ಯೋಜನೆಯ ಪಲಾನುಭವಿಗಳಿಗೆ ಚೆಕ್‌ ವಿತರಿಸಿ ಮಾತನಾಡಿ, ‘ಕೋಚಿಮುಲ್ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ. ಹಸು ವಿಮೆ ಮೂಲಕ ಹೈನುಗಾರರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಒಕ್ಕೂಟ ನೆರವಾಗಲಿದೆ’ ಎಂದು ಭರವಸೆ ನೀಡಿದರು.

‘ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಹಾಲು ಖರೀದಿ ದರ ಕಡಿಮೆ ಮಾಡಲಾಗಿದೆ. ಮುಂದೆ ವಹಿವಾಟು ಸುಧಾರಿಸಿದಾಗ ಹಾಲು ಖರೀದಿ ದರ ಹೆಚ್ಚಿಸುತ್ತೇವೆ. ಈಗ ದರ ಕಡಿಮೆ ಮಾಡಿರುವುದಕ್ಕೆ ರೈತಾಪಿ ವರ್ಗ ಧೃತಿಗೆಡಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ತಾಲ್ಲೂಕನ್ನು ಕ್ಯಾನ್‌ರಹಿತ ಹಾಲು ಸಂಗ್ರಹ ತಾಲ್ಲೂಕಾಗಿ ಮಾಡುತ್ತೇವೆ. ಎಲ್ಲಾ ಎಂಪಿಸಿಎಸ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಒಕ್ಕೂಟದಿಂದ ಹಣಕಾಸು ನೆರವು ನೀಡಲಾಗುತ್ತದೆ. ₹ 567 ಪಾವತಿಸಿ ರಾಸುಗಳಿಗೆ ವಿಮೆ ಮಾಡಿಸಬೇಕು. ರಾಸುಗಳಿಗೆ ಆಕಸ್ಮಿಕವಾಗಿ ಮೃತಪಟ್ಟರೆ ಪ್ರತಿ ರಾಸಿಗೆ ₹ 70 ಸಾವಿರ ಪರಿಹಾರ ಸಿಗಲಿದೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ಅನೇಕ ಸೌಲಭ್ಯ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು. ಹಾಲು ಉತ್ಪಾದನೆ ಮತ್ತು ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೈನುಗಾರಿಕೆಯನ್ನು ಜೀವಂತವಾಗಿ ಉಳಿಸಿ. ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

ಎಸ್‌ಎನ್‌ಎಫ್‌ ಪರೀಕ್ಷೆ: ‘ಹಾಲಿನ ಕಲಬೆರಕೆ ಮಾಡದಂತೆ ಸಂಘಗಳ ಮಟ್ಟದಲ್ಲಿ ವೈಜ್ಞಾನಿಕವಾಗಿ ಹಾಲು ಪರೀಕ್ಷಾ ಉಪಕರಣಗಳನ್ನು ಅಳವಡಿಸಿ ಹಾಲು ಶೇಖರಣೆ ಮಾಡಬೇಕು. ಎಸ್‌ಎನ್‌ಎಫ್‌ ಪರೀಕ್ಷೆ ಮಾಡಿ ದರ ನೀಡಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಮಹೇಶ್ ಸೂಚಿಸಿದರು.

ಶಿಬಿರ ವಿಸ್ತರಣಾಧಿಕಾರಿಗಳು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.