ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಮಾಲೂರು: ತಾಲ್ಲೂಕಿನ ಸರ್ಕಾರಿ ಆಸ್ತಿ ಹಾಗೂ ಕಲ್ಲು ಬಂಡೆಯನ್ನು ಭೂಗಳ್ಳರಿಂದ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಜೊತೆಗೆ ಪಿ.ನಂಬರ್ ದುರಸ್ತಿ ಸಾಗುವಳಿ ಚೀಟಿ ನೀಡಲು ಲಂಚ ಪಡೆಯುತ್ತಿರುವ ಸರ್ವೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಪಲೋಕಾಯುಕ್ತರಿಗೆ ದೂರು ನೀಡುವುದಾಗಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ತಿಳಿಸಿದರು.
ನಗರದದಲ್ಲಿ ಬುಧವಾರ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಕೆಲಸ ಮಾಡಬೇಕಾದ ಕಂದಾಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ರಾಜಕಾರಿಣಿಗಳು, ಭೂಗಳ್ಳರು ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರ ಕಪಿಮುಷ್ಠಿಯಲ್ಲಿ ಸಿಲುಕಿ ಅವರು ಹೇಳಿದ ಹಾಗೆ ಕುಣಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಕೋಟಿ ಬೆಲೆ ಬಾಳುವ ಸಾವಿರಾರು ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸುವವರು ಯಾರು? ತಾಲ್ಲೂಕಿನಲ್ಲಿ ಅಕ್ರಮ ಮಂಜೂರಾತಿ ಆದೇಶದಂತಹ ನೂರಾರು ಪ್ರಕರಣಗಳು ನಡೆಯುತ್ತಿದ್ದರೂ ತಹಶೀಲ್ದಾರ್ ಯಾವುದಕ್ಕೂ ಸಂಬಂಧವಿಲ್ಲದಂತೆ ಇರುವುದು ಸಂಶಯ ಮೂಡಿಸುತ್ತಿದೆ ಎಂದು ಆರೋಪಿಸಿದರು.
ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ಕಂದಾಯ ಸಚಿವರು ರೈತರಿಗೆ ಅನುಕೂಲವಾಗಲಿ ಎಂದು ಪಿ ನಂಬರ್ ದುರಸ್ತಿಗೆ ಆದೇಶ ಮಾಡಿದರು. ಆದರೆ ಅಧಿಕಾರಿಗಳು ರೈತರ ಪಿ ನಂಬರ್ ದುರಸ್ತಿ ಮಾಡದೆ ಭೂಗಳ್ಳರ ಕಡತಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಲಕ್ಷಾಂತರ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಸ್ತಿ ಹೊಸಹಳ್ಳಿ ವೆಂಕಟೇಶ ಹರೀಶ್, ಆಂಜಿನಪ್ಪ, ಕಾಮನೂರು ಬಾಬು, ಕಮ್ಮದಟ್ಟಿ ಚಲಪತಿ ಮಂಜುನಾಥ, ದೇವರಾಜ, ರೂಪೇಶ್, ತಿಮ್ಮಣ್ಣ, ಗಿರೀಶ್, ರಾಜು, ರಾಜೇಶ್, ಪಾರೂಕ್ ಪಾಷ, ನಾಗರಾಜು ಭಾಸ್ಕರ್, ಸುನೀಲ್ ಕುಮಾರ್, ಸುಪ್ರಿಂ ಚಲ, ಕೇಶವ, ವೇಣು, ಧರ್ಮ, ರಾಮಕೃಷ್ಣಪ್ಪ, ಗಣೇಶ್ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.