ADVERTISEMENT

ಸಾಹಿತಿಗಳ ಸಮಗ್ರ ಕೋಶ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 14:12 IST
Last Updated 20 ಮಾರ್ಚ್ 2019, 14:12 IST

ಕೋಲಾರ: ‘ರಾಜ್ಯ ಸಾಹಿತ್ಯ ಅಕಾಡೆಮಿಯು ಸಾಹಿತಿಗಳ ಬದುಕು, ಬರಹ ಕುರಿತು ಬಂಗಾರದ ಎಲೆಗಳು ಶೀರ್ಷಿಕೆಯಡಿ ಸಮಗ್ರ ಕೋಶ ಬಿಡುಗಡೆ ಮಾಡಲಿದೆ’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮಗ್ರ ಕೋಶದಲ್ಲಿ ಜಿಲ್ಲೆಯ ಸಾಹಿತಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ವಲಸೆ ಬಂದು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಸಾಹಿತಿಗಳ ಸಮಗ್ರ ಕೋಶದಲ್ಲಿ 1820ರಿಂದ 2020ರವರೆಗಿನ ಸುಮಾರು 200 ವರ್ಷಗಳ ಎಲ್ಲಾ ಸಾಹಿತಿಗಳ ಸಂಕ್ಷಿಪ್ತ ಪರಿಚಯ, ಮಾಹಿತಿ ಸಂಗ್ರಹಿಸಲಾಗುತ್ತದೆ. ಜಿಲ್ಲೆಯ ಎಲ್ಲಾ ಸಾಹಿತಿಗಳು ಶೀಘ್ರವೇ ಸ್ವವಿವರ ನೀಡಬೇಕು. ಈವರೆಗೆ 100 ಸಾಹಿತಿಗಳಷ್ಟೇ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯ ಎಲ್ಲಾ ಸಾಹಿತಿಗಳ ಪರಿಚಯವನ್ನು ಸಮಗ್ರ ಕೋಶ ಒಳಗೊಂಡಿರುತ್ತದೆ. ಕನಿಷ್ಠ ಎರಡು ಕೃತಿ ಪ್ರಕಟಿಸಿದವರನ್ನು ಪರಿಗಣಿಸಲಾಗುತ್ತದೆ. ಜತೆಗೆ ಒಂದೂ ಪುಸ್ತಕ ಬರೆದರು ಅದು ಸಾಹಿತ್ಯಕವಾಗಿ ಗಟ್ಟಿಯಾಗಿರುವ ಪುಸ್ತಕವಾಗಿರಬೇಕು. ಅಂತಹವರಿಗೂ ಅವಕಾಶ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ 7892625296 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು’ ಎಂದರು.

‘ಜಿಲ್ಲೆಯಲ್ಲಿ ಯುವ ಕಾವ್ಯ ಅಭಿಯಾನ ದ್ವಿತೀಯ ಪಿಯುಸಿ ಹಂತದಿಂದ ನಡೆಯುತ್ತಿದ್ದು, 100 ವಿದ್ಯಾರ್ಥಿಗಳು ಮತ್ತು 100 ಯುವ ಸಾಹಿತಿಗಳನ್ನು ಗುರುತಿಸಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪರಿಚಯಿಸುವ ಪ್ರಯತ್ನ: ‘ಜಿಲ್ಲೆಯ ಸಾಹಿತ್ಯವನ್ನು ಕಟ್ಟಿ ಬೆಳೆಸಿದ ಸಾಹಿತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಸಾಹಿತಿಗಳ ಸಮಗ್ರ ಕೋಶ ಹೊರ ತರಲಾಗುತ್ತಿದೆ’ ಎಂದು ಸಾಹಿತಿ ಸ.ರಘುನಾಥ್ ಹೇಳಿದರು.

‘ಈ ಹಿಂದೆ ಜಿಲ್ಲೆಯಲ್ಲಿ ತೆಲುಗು ಸಾಹಿತಿಗಳು ಹೆಚ್ಚು ಪ್ರಭಾವಿತರಾಗಿದ್ದರು. ಆ ನಂತರ ಬಂದವರು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದರು. ಮ್ಮೊಟ್ಟಿಗೆ ಇಲ್ಲದಿರುವ ಹಿರಿಯ ಸಾಹಿತಿಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.