ADVERTISEMENT

ಜೆಡಿಎಸ್‌, ಬಿಜೆಪಿ ಪೊಳ್ಳು ಭರವಸೆ ನಂಬದಿರಿ: ಸಚಿವ ಬೈರತಿ ಸುರೇಶ್ ವಾಗ್ದಾಳಿ

ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:06 IST
Last Updated 10 ಆಗಸ್ಟ್ 2025, 3:06 IST
ವೇಮಗಲ್‌ ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ನಸೀರ್‌ ಅಹ್ಮದ್‌, ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ವಿ.ಆರ್‌.ಸುದರ್ಶನ್, ಗೌತಮ್‌ ಪಾಲ್ಗೊಂಡಿದ್ದರು
ವೇಮಗಲ್‌ ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ನಸೀರ್‌ ಅಹ್ಮದ್‌, ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ವಿ.ಆರ್‌.ಸುದರ್ಶನ್, ಗೌತಮ್‌ ಪಾಲ್ಗೊಂಡಿದ್ದರು   

ವೇಮಗಲ್‌ (ಕೋಲಾರ): ‘ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸುಳ್ಳು ಹೇಳಿಕೊಂಡೇ ಜನರನ್ನು ಯಾಮಾರಿಸುವ ಜೆಡಿಎಸ್, ಬಿಜೆಪಿ ಮತ್ತು ವರ್ತೂರು ಪಕ್ಷಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಚುನಾವಣೆ ಪೂರ್ವದಲ್ಲಿ ನುಡಿದಂತೆ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವನ್ನು ಮಾತ್ರ ಬೆಂಬಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಜನರು ಜೆಡಿಎಸ್ ಮತ್ತು ಬಿಜೆಪಿಗೆ ಅಧಿಕಾರ ಕೊಟ್ಟಾಗ ಅಭಿವೃದ್ಧಿಗೆ ಒತ್ತು ನೀಡದೆ ಜಾತಿ ಧರ್ಮಗಳ ಮಧ್ಯೆ ತಂದಿಡುವುದೇ ಆ ಪಕ್ಷಗಳ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಹಾಳು ಮಾಡದೆ ಮನೆ ಮನೆಗೆ ಸೌಲಭ್ಯ ಒದಗಿಸಿದೆ. ಕಾಂಗ್ರೆಸ್ ಪಕ್ಷವು ಬಡವರ, ದಲಿತರ ಹಾಗೂ ಮಹಿಳೆಯರ ಪರವಾಗಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಈಗಾಗಲೇ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ವೇಮಗಲ್ ಭಾಗದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ಕಾಲೇಜು, ಎಪಿಎಂಸಿಗೆ ನೂರು ಎಕರೆ ಜಾಗ, ರಿಂಗ್ ರಸ್ತೆ, ಮೂರು ಸಾವಿರ ವೆಚ್ಚದ ರಸ್ತೆ ಸೇರಿದಂತೆ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಮುಂದೆಯೂ ವೇಮಗಲ್ ತಾಲ್ಲೂಕು ಕೇಂದ್ರವಾಗಿ ಮಾಡಲಾಗುತ್ತದೆ. ತಮ್ಮ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ಕೂಡ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ವಿಧಾನ ಪರಿಷತ್‌ ಸದಸ್ಯರು ಕಾಂಗ್ರೆಸ್‌ನವರು ಇದ್ದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದು ಅಭಿವೃದ್ಧಿಗೆ ಪೂರಕವಾಗಲಿದೆ. ಕೈಗಾರಿಕೆ ಸ್ಥಾಪನೆಯಾದ ನಂತರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿತು. ಮತ್ತಷ್ಟು ಅಭಿವೃದ್ಧಿಯಾಗಬೇಕೆಂದರೆ ಅದು ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದರು.

‘ಇಲ್ಲಿ ಹಕ್ಕು ಪತ್ರ ವಿತರಣೆಯಾಗಿದ್ದು, ಇನ್ನೂ ಪಕ್ಕಾ ಖಾತೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ಆ ಕೆಲಸ ಮಾಡಿಕೊಡುತ್ತೇನೆ. ಕಾನೂನು ತೊಡಕು ಬಾರದಂತೆ ಸೂರಿಗೆ ಗ್ಯಾರಂಟಿ ಮಾಡಿಕೊಡುತ್ತೇನೆ’ ಎಂದು ನುಡಿದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಜೆಡಿಎಸ್ ಮತ್ತು ಬಿಜೆಪಿ ಜನರನ್ನು ಯಾಮಾರಿಸಿದ್ದು ಆಗಿದೆ. ಅವರ ಆಟ ಚುನಾವಣೆಯಲ್ಲಿ ನಡೆಯಲ್ಲ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ‘ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಎಲ್ಲಾ ಜಾತಿ ಧರ್ಮಗಳಿಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. 17 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ 5, ಹಿಂದುಳಿದ ವರ್ಗಕ್ಕೆ 5, ಒಕ್ಕಲಿಗ 4, ಪರಿಶಿಷ್ಟ ಪಂಗಡ 1, ಮುಸ್ಲಿಂ 1, ಲಿಂಗಾಯತ 1 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ’ ಎಂದರು.

‌ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಲೋಕಸಭಾ ಪರಾಜಿತ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿದರು.

ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಕೋಮುಲ್‌ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೈ.ಶಿವಕುಮಾರ್, ಮುನಿಯಪ್ಪ ಇದ್ದರು.

ಖಾತೆಗೆ ಹಣ–ತಪ್ಪಿದ ಭ್ರಷ್ಟಾಚಾರ

‘ನಮ್ಮ ಸರ್ಕಾರ ಐದು ಗ್ಯಾರಂಟಿ ನೀಡಿದ್ದು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಯಾರಿಗೂ ಹಣ ಕೊಡಬೇಕಾಗಿಲ್ಲ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಈಗಾಗಲೇ ವೇಮಗಲ್‌–ನರಸಾಪುರ ಭಾಗದಲ್ಲಿ ಯೋಜನಾ ಪ್ರಾಧಿಕಾರ ಘೋಷಣೆ ಮಾಡಲಾಗಿದೆ. ಎಚ್.ಕ್ರಾಸ್ ವೇಮಗಲ್ ಕೋಲಾರ ನರಸಾಪುರ ಮಾಲೂರು ಹೊಸೂರು ಹೆದ್ದಾರಿ ನಿರ್ಮಿಸಲು ₹ 3200 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಇದು ವ್ಯಾಪಾರ ವಹಿವಾಟಿಗೆ ನೆರವಾಗುತ್ತದೆ ಎಂದರು.

ಈ ಮಣ್ಣಿನ ಋಣದಲ್ಲಿ ನಾನು ಹಾಗೂ ನನ್ನ ಕುಟುಂಬ ಬದುಕಿದೆ‌. ಅದನ್ನು ಮರೆಯಲು ಸಾಧ್ಯವಿಲ್ಲ‌. ಈ ಭಾಗದ ಜನ ನಮ್ಮ ತಂದೆಯವರ ಕಾಲದಿಂದ ಶಕ್ತಿ ತುಂಬಿದ್ದಾರೆ. ಎಂದಿಗೂ ತಮ್ಮೊಂದಿಗೆ ಇರುತ್ತೇನೆ. .
–ಕೃಷ್ಣಬೈರೇಗೌಡ, ಕಂದಾಯ ಸಚಿವ
ಜೆಡಿಎಸ್‌–ಬಿಜೆಪಿಯವರು ಎಚ್.ಕ್ರಾಸ್‌ನಲ್ಲಿ ಟೋಕನ್ ಕೊಟ್ಟು ಜನರನ್ನು ಮತ್ತೊಮ್ಮೆ ಯಾಮಾರಿಸಲು ಹೊರಟಿದ್ದಾರೆ. ಜನ ಸ್ವಾಭಿಮಾನದಿಂದ ತಕ್ಕ ಪಾಠ ಕಲಿಸಲಿದ್ದಾರೆ.
–ಕೊತ್ತೂರು ಮಂಜುನಾಥ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.