ಬಂಗಾರಪೇಟೆ: 'ವಿರೋಧಿಗಳು ತನ್ನ ವಿರುದ್ಧ ಏನೆಲ್ಲ ಷಡ್ಯಂತ್ರ ಮಾಡಿದರೂ ಒಳ್ಳೆಯವರನ್ನು ಭಗವಂತ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಹೈಕೋರ್ಟ್ನಿಂದ ನನಗೆ ಸಿಕ್ಕ ಜಯವೇ ಸಾಕ್ಷಿ' ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆಗಿದ್ದ ಧರಣಿದೇವಿ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಮಂಜುನಾಥ್ ಪ್ರಸಾದ್ ಅವರ ಪ್ರಚೋದನೆಗೆ ಒಳಪಟ್ಟು ಸುಳ್ಳು ಮೊಕದ್ದಮೆ ದಾಖಲಿಸಿದ್ದರು.
’ಯಾರೋ ವ್ಯಾಪಾರಸ್ಥರಿಗೆ ಸೇರಿದ ಹಣವನ್ನು ಜಿಯಾನ್ ಹಿಲ್ಸ್ ಗಾಲ್ಫ್ ವಿಲ್ಲಾದಲ್ಲಿ ವಶಕ್ಕೆ ಪಡೆದ ರೀತಿಯಲ್ಲಿ ಮಾಡಿ ಅಪವಾದವನ್ನು ನನ್ನ ಮೇಲೆ ಹೊರೆಸಿ ಮೊಕದ್ದಮೆ ದಾಖಲಿಸಿದ್ದರು‘ ಎಂದರು.
’ಮಂಜುನಾಥ್ ಪ್ರಸಾದ್ ಅವರ ಪಾಲುದಾರಿಕೆ ಹೊಂದಿರುವ ಬಿ.ಟಿವಿ ಸೇರಿದಂತೆ ಹಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಕೂಡ ಮಾಡಲಾಯಿತು‘ ಎಂದು ದೂರಿದರು.
‘ಮಂಜುನಾಥ ಪ್ರಸಾದ್ ಜತೆ ಕೈಜೋಡಿಸಿದ್ದ ಧರಣಿದೇವಿ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಪಣತೊಟ್ಟಿದ್ದರು. ಬಿಜೆಪಿಯೊಂದಿಗೆ ಶಾಮೀಲಾಗಿ ಷಡ್ಯಂತ್ರ ರೂಪಿಸಿದ್ದರು’ ಎಂದು ಆರೋಪಿಸಿದರು.
’ಈ ಎಲ್ಲ ಷಡ್ಯಂತ್ರ ವಿರುದ್ಧ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದೆ. ವಿಚಾರಣೆ ನಡೆಸಿದ ಹೈಕೋರ್ಟ್ ನನ್ನ ವಿರುದ್ಧ ದಾಖಲಿಸಿದ್ದ ಕ್ರೈಮ್ ಪಿಟಿಷನ್ ಅನ್ನು ಜುಲೈ 7ರಂದು ವಜಾ ಮಾಡಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.