
ಕೋಲಾರ: ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ದೇಶದ ಪ್ರಧಾನಿಯವರೆಗೆ ಒಬ್ಬರನೊಬ್ಬರು ಪರಸ್ಪರ ಗೌರವಿಸುವ ಪದ್ಧತಿ ಇದೆ. ಆದರೆ, ಪ್ರಧಾನಿ ಮೋದಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳು ಅಸಂವಿಧಾನಿಕವಾಗಿ ನಿಂದಿಸಿ ಹೇಡಿ ಎಂಬ ಪದ ಬಳಸಿ ಅಗೌರವ ತೋರಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೋದಿ ಅವರ ಕಾಲಿನ ದೂಳಿಗೆ ಸಮವಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಹೇಡಿ ಎಂದು ಕರೆದಿದ್ದಾರೆ. ಪಕ್ಕದಲ್ಲಿ ಅಪ್ಪನ ಹೆಸರು ಇಲ್ಲವೆಂದರೆ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲ್ಲ. ಚಿನ್ನಕ್ಕೆ ಹೆಸರಾದ ಕೋಲಾರದ ಮಣ್ಣಿನ ನಸೀರ್ ಅಹ್ಮದ್ ಕೂಡ ಅಸಂವಿಧಾನಿಕ ಪದ ಬಳಕೆ ಮಾಡಿದ್ದು, ದೇಶದ್ರೋಹಿ ಎಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಪ್ರಧಾನಿಯನ್ನು ಎಲ್ಲಾದರೂ ಈ ರೀತಿ ನಿಂದನೆ ಮಾಡುತ್ತಾರೆಯೇ? ನಗರ ನಕ್ಸಲು ಎನಿಸಿಕೊಂಡ ಕಮ್ಯೂನಿಸ್ಟರನ್ನು ದೇಶದ ಜನ ಈಗಾಗಲೇ ತಿರಸ್ಕರಿಸಿದ್ದಾರೆ. ಕಮ್ಯುನಿಸ್ಟರ ಜೊತೆ ಜೊತೆ ಸೇರಿರುವ ಕಾಂಗೆಸ್ಸಿಗರೂ ನಗರ ನಕ್ಸಲರ ರೀತಿ ವರ್ತಿಸುತ್ತಿದ್ದಾರೆ. ಈ ಪಕ್ಷಕ್ಕೆ ‘ಕಮ್ಯೂನಿಸ್ಟ್ ಕಾಂಗ್ರೆಸ್ ನಗರ ನಕ್ಸಲರು’ ಎಂಬ ಹೊಸ ಹೆಸರು ಬಂದಿದೆ. ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಹಿಡಿದು ರಾಜ್ಯದವರೆಗೆ ಕಾಂಗ್ರೆಸ್ನಿಂದ ಅನಿಷ್ಠ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಈಚೆಗೆ ಸರ್ಕಾರದ ಹಣ ಬಳಸಿ ಜಾಹೀರಾತು ನೀಡಿದ್ದಾರೆ. ಸಂಗಪ್ಪ ಎಂಬ ಹೆಸರು ಬಳಸಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಶ್ನಿಸುತ್ತಿದ್ದಾರೆ. ಮೊದಲು ಕಾಂಗ್ರೆಸ್ನಲ್ಲಿರುವ ನುಂಗಪ್ಪಗಳ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ದಲಿತರಿಗೆ ₹ 42 ಸಾವಿರ ಕೋಟಿ ಅನುದಾನ ನೀಡಿರುವುದಾಗಿ ಹೇಳುತ್ತಾರೆ. ಆದರೆ, ಅದನ್ನು ಗ್ಯಾರಂಟಿಗೆ ಕೊಟ್ಟಿದ್ದಾರೆ, ನಿಗಮಗಳಿಗೆ ಅನುದಾನವೇ ಇಲ್ಲ ಎಂದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಲೋಕಾಯುಕ್ತರು ದಾಳಿ ನಡೆಸಿದಾಗ ₹ 25 ಲಕ್ಷ ನಗದು ಸಿಕ್ಕಿದೆ. ಮೂವರು ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಆಡಿಯೊ ಕೂಡ ಬಿಡುಗಡೆಯಾಗಿದ್ದು, ಸಚಿವರ ಹೆಸರು ಪ್ರಸ್ತಾಪವಾಗಿದೆ. ಇಷ್ಟೆಲ್ಲಾ ಇದ್ದರೂ ರಾಜೀನಾಮೆ ಪಡೆಯುತ್ತಿಲ್ಲ. ಸರ್ಕಾರದ ಮಾನ ಮರ್ಯಾದೆ ಹರಾಜಾಗುತ್ತದೆ ಎಂದು ರಕ್ಷಣೆ ಮಾಡುತ್ತಿದ್ದಾರೆ. ಇದರ ಹಿಂದೆ ಆ ಪಕ್ಷದ ಹೈಕಮಾಂಡ್ ಇದೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜೊತೆ ಸಿದ್ದರಾಮಯ್ಯ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಅರಸು ಕೊಡುಗೆ ಅಪಾರ. ಭೂಸುಧಾರಣೆ ಕಾಯ್ದೆ ಜಾರಿ ಮಾಡಿದರು, ಮಲಹೊರುವ ಪದ್ಧತಿ ತೊಡೆದು ಹಾಕಿದರು. ಸಿದ್ದರಾಮಯ್ಯ ಜಾರಿ ಮಾಡಿದ ಯಾವುದಾದರೂ ಒಂದು ಯೋಜನೆ ಹೇಳಿ? ಗ್ಯಾರಂಟಿ ಯೋಜನೆ ನೆನಪನಲ್ಲಿ ಉಳಿಯುವುದೇ ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ನಮ್ಮ ಸರ್ಕಾರ ಬರಲಿ. ಯಾವುದೇ ವ್ಯಕ್ತಿ ಸರ್ಕಾರದ ತುಂಡು ಭೂಮಿ ಹೊಡೆದಿದ್ದರೂ ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ಕೆ.ಎಸ್.ಮಂಜುನಾಥ್ ಗೌಡ, ಬಿ.ಪಿ.ವೆಂಕಟಮುನಿಯಪ್ಪ, ಮುಖಂಡರಾದ ವಿಜಯಕುಮಾರ್, ಅರುಣಮ್ಮ, ಎಸ್.ಬಿ.ಮುನಿವೆಂಕಟಪ್ಪ, ಸೀಗೇಹಳ್ಳಿ ಸುಂದರ್, ಪ್ರವೀಣಗೌಡ, ಕೆಂಬೋಡಿ ನಾರಾಯಣಸ್ವಾಮಿ, ತೇಜಸ್, ಬಾಲಾಜಿ, ಅಪ್ಪಿ ರಾಜು, ಜಿಲ್ಲಾ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.