ADVERTISEMENT

ಕಾಂಗ್ರೆಸ್‌ನ ದ್ವಂದ್ವ ನಿಲುವಿನಿಂದ ಉಗ್ರರ ಅಟ್ಟಹಾಸ: ವಿಜಯೇಂದ್ರ

ದೇಶದ ಯೋಧರ ಒಳಿತಿಗಾಗಿ ಕೋಲಾರಮ್ಮ ದೇಗುಲದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:22 IST
Last Updated 7 ಮೇ 2025, 14:22 IST
ಕೋಲಾರದ ಕೋಲಾರಮ್ಮ ದೇಗುಲದ ಮುಂದೆ ಬುಧವಾರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮುಖಂಡರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು
ಕೋಲಾರದ ಕೋಲಾರಮ್ಮ ದೇಗುಲದ ಮುಂದೆ ಬುಧವಾರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮುಖಂಡರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು   

ಕೋಲಾರ: ‘ಕಾಂಗ್ರೆಸ್‌ ಪಕ್ಷದವರ ದ್ವಂದ್ವ ಹಾಗೂ ದೇಶ ವಿರೋಧಿ ನೀತಿಯಿಂದಲೇ ಉಗ್ರರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಕುಟುಂಬಗಳು ಮನೆಮಠ ಕಳೆದುಕೊಂಡಿವೆ, ಯೋಧರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾ ಪ್ರಹಾರ ನಡೆಸಿದರು.

ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವ ಭಾರತದ ಯೋಧರ ಒಳಿತಿಗಾಗಿ ಬುಧವಾರ ನಗರದ ಶಕ್ತಿದೇವತೆ ಕೋಲಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಂಥ ಸಂದರ್ಭದಲ್ಲೂ ಕಾಂಗ್ರೆಸ್‌ನವರು ಟ್ವೀಟ್‌ ಮೂಲಕ ಶಾಂತಿ ಸ್ಥಾಪನೆ ಮಂತ್ರ ಜಪಿಸುತ್ತಿದ್ದಾರೆ. ಯೋಧರ ಪರವಾಗಿ, ದೇಶದ ಪರವಾಗಿ ಗಟ್ಟಿಯಾಗಿ ನಿಲ್ಲಬೇಕೇ ಹೊರತು ಈಗ ಶಾಂತಿ ಸ್ಥಾಪನೆ ನಿಲುವು ಸರಿಯಲ್ಲ. ಯೋಧರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪಹಲ್ಗಾಮ್‌ ಕೃತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ವಿರುದ್ಧ ನಮ್ಮ ಯೋಧರು ಹೋರಾಟ ಆರಂಭಿಸಿದ್ದಾರೆ. ಈ ಹೋರಾಟದಲ್ಲಿ ಭಾರತಕ್ಕೆ ಯಶಸ್ಸು ಸಿಗಬೇಕು, ರಕ್ತದೋಕುಳಿ ಹರಿಸುತ್ತಿರುವ ಭಯೋತ್ಪಾದಕರನ್ನು ಮಟ್ಟಹಾಕಲು ನಮ್ಮ ಯೋಧರಿಗೆ ಶಕ್ತಿ ತುಂಬಬೇಕು. ಪ್ರಧಾನಿ ಮೋದಿ ನಿರ್ಧಾರಗಳ ಜೊತೆ ಇಡೀ ಭಾರತ ಗಟ್ಟಿಯಾಗಿ ನಿಲ್ಲಬೇಕು’ ಎಂದರು.

‘ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರು, ಜನರು ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಸೈನಿಕರಿಗೆ ಶಕ್ತಿ ತುಂಬಲು ಪ್ರಾರ್ಥಿಸಬೇಕು‌’ ಎಂದು ಕರೆ ನೀಡಿದರು.

‘ಪ್ರಧಾನಿ ಮೋದಿ ಅವರ ದಿಟ್ಟ ನಾಯಕತ್ವ ದೇಶದ ಯೋಧರಿಗೆ ದೊಡ್ಡಮಟ್ಟದ ಶಕ್ತಿ ತಂದುಕೊಟ್ಟಿದೆ. ಹೀಗಾಗಿ, ಯೋಧರು ನಿರ್ಭಿತಿಯಿಂದ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟದಲ್ಲಿ ಖಂಡಿತ ಯಶಸ್ಸು ಸಿಗಲಿದೆ’ ಎಂದರು.

ಪಕ್ಷದ ಮುಖಂಡರ ಜೊತೆ ಅವರು ಕೋಲಾರಮ್ಮನ ದರ್ಶನ ಪಡೆದು ಪ್ರಾರ್ಥಿಸಿದರು. ‘ಭಾರತ ಮಾತಾಕೀ ಜೈ, ಯೋಧರಿಗೆ ಜಯವಾಗಲಿ’ ಎಂಬ ಕಾರ್ಯಕರ್ತರ ಜಯಘೋಷಗಳ ನಡುವೆ ಅರ್ಚಕರು ಮಂತ್ರ ಪಠಿಸಿದರು. ತ್ರಿವರ್ಣಧ್ವಜಕ್ಕೂ ಪೂಜೆ ಸಲ್ಲಿಸಲಾಯಿತು. ಕಾರ್ಯಕರ್ತರ ಜೊತೆ ವಿಜಯೇಂದ್ರ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.

ವಿಧಾನ ಪರಿಷತ್ ವಿರೋಧ‌ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಶಾಸಕ ಹರೀಶ್‌ ಪೂಂಜಾ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ವರ್ತೂರು ಪ್ರಕಾಶ್‌, ಮಾಜಿ ಸಂಸದ ಎನ್‌.ಮುನಿಸ್ವಾಮಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ತಮ್ಮೇಶ್‌ ಗೌಡ, ಮುನಿರಾಜು, ಜಗದೀಶ್‌, ಶರಣು ತಳ್ಳೀಕೇರಿ ಪಾಲ್ಗೊಂಡಿದ್ದರು.

ಜನಾಕ್ರೋಶ ಕೈಬಿಟ್ಟು ಒಗ್ಗಟ್ಟು ಪ್ರದರ್ಶನ

‘ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತದ ಯೋಧರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ನಮ್ಮ ಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ಜನಾಕ್ರೋಶ ಯಾತ್ರೆ ಕೈಬಿಟ್ಟು ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ’ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

  ‘ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯಬೇಕಿತ್ತು‌. ಆದರೆ ಬಿಜೆಪಿ ಕಾರ್ಯಕರ್ತರಿಗೆ ದೇಶ ಮೊದಲು; ಪಕ್ಷ ವ್ಯಕ್ತಿ ನಂತರ. ದೇಶದ ಎಲ್ಲಾ‌ ರಾಜಕೀಯ ಪಕ್ಷದವರು ಜನರು ಒಂದಾಗಿದ್ದೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಬೇಕು. ಮತ್ತೆ ಪಾಕಿಸ್ತಾನ ಭಾರತದ ‌ಕಡೆ ನೋಡಬಾರದು. ಉಗ್ರರು‌ ಮತ್ತೆ ಉಸಿರು ಎತ್ತಬಾರದು’ ಎಂದರು.

‘ಬೆಲೆ ಏರಿಕೆ ಮುಸ್ಲಿಂ ಓಲೈಕೆ ದಲಿತ ಹಣ ಲೂಟಿ’ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯ ನಾಲ್ಕನೇ ಹಂತದ ಜನಾಕ್ರೋಶ ಯಾತ್ರೆ ಕೋಲಾರದಲ್ಲಿ ಬುಧವಾರ ಆರಂಭವಾಗಬೇಕಿತ್ತು. ಯಾತ್ರೆ ಬದಲು ಬಿಜೆಪಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು.

ಕೋಲಾರದಲ್ಲಿ ಬುಧವಾರ ನಡೆದ ಜನಾಕ್ರೋಶ ಯಾತ್ರೆ ಸಭೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮುಖಂಡರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು
ಕೋಲಾರದ ಕೋಲಾರಮ್ಮ ದೇಗುಲದಲ್ಲಿ ಬುಧವಾರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.