ADVERTISEMENT

ಅನಧಿಕೃತ ನೀರು ಬಳಕೆ ನಿಯಂತ್ರಿಸಿ: ಕೆ.ಆರ್.ರಮೇಶ್‌ಕುಮಾರ್

ವಿಧಾಸಭಾಧ್ಯಕ್ಷ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 12:40 IST
Last Updated 4 ಜೂನ್ 2019, 12:40 IST
ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿದರು.
ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿದರು.   

ಕೋಲಾರ: ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೆಸಿವ್ಯಾಲಿ ವಿಚಾರವಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅಧಿಕಾರಿಗಳ ವಿರುದ್ಧ ಆರಂಭದಲ್ಲೇ ಗರಂ ಆದರು.

‘ಬರದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಕೆಸಿವ್ಯಾಲಿ ಯೋಜನೆಯಡಿ ನೀರನ್ನು ಹರಿಸಲಾಗುತ್ತಿದೆ. ಅನೇಕರು ಅರಿವಿಲ್ಲದೆ ನೀರನ್ನು ನೇರವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಬಳಸದಂತೆ ಒಳ್ಳೆಯ ಮಾತಲ್ಲಿ ಹೇಳಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸೂಚಿಸಿದರು.

‘ಕೆಸಿವ್ಯಾಲಿ ಯೋಜನೆಯಡಿ ನೀರು ಹರಿಯುತ್ತಿರುವ ಭಾಗದಲ್ಲಿ ಕೆಲವರು ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ನೀಡದ ತಹಸೀಲ್ದಾರ್ ಗಾಯಿತ್ರಿ ಅವರನ್ನು ತರಾಟೆಗೆ ತೆಗೆದುಕೊಂಡು, ನೀವು ಖುರ್ಚಿ ಬದಲಿಸದೆ ಇಲ್ಲಿಯೇ ಕುಳಿತಿದ್ದರೆ ಹೇಗೆ, ಮೊದಲು ಸ್ಥಳಕ್ಕೆ ಭೇಟಿ ನೀಡಿ. ಮುಲಾಜಿಲ್ಲದೆ ಪಂಪ್, ಮೋಟಾರು ಜಪ್ತಿಪಡಿಸಿಕೊಳ್ಳಿ’ ಎಂದು ತಾಕೀತು ಮಾಡಿದರು.

ADVERTISEMENT

‘ರಾಜ್ಯದಲ್ಲೇ ನತದೃಷ್ಠ ಜಿಲ್ಲೆ ಕೋಲಾರ. 14 ವರ್ಷ ಸತತ ಬರಗಾಲ ಅನುಭವಿಸಿದ್ದೇವೆ. ಈಗ ಪರಿಸರ ಅದು, ಇದು ಎನ್ನುವುದಕ್ಕಿಂತ ಜನರು ಬದುಕಲು ನೀರು ನೀಡುವುದಷ್ಟೇ ಮುಖ್ಯ ಅದಕ್ಕೆ ಎಲ್ಲರೂ ಮುಂದಾಗಬೇಕು’ ಎಂದರು.

‘ಕೆಸಿವ್ಯಾಲಿ ಯೋಜನೆ ನೀರು ಹರಿಯುತ್ತಿರುವ ಪ್ರದೇಶದಲ್ಲಿ ನೀರನ್ನು ನೋಡಿರದ ಜನರು ತಮಗೆ ಇಟ್ಟುಕೊಂಡು ಬಿಡಬೇಕು ಎನ್ನುವ ನಿಟ್ಟಿನಲ್ಲಿ ಕೆಲವರು ಪಂಪ್, ಮೋಟರ್ ಬಳಸಿಕೊಳ್ಳುವುದು, ಇಡುವಳಿ ಜಮೀನಿನಲ್ಲಿ ಹಳ್ಳಗಳನ್ನು ತೋಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗೆ ಮಾಡಬಾರದು ಇಡೀ ಜಿಲ್ಲೆಗಾಗಿ ಅನುಷ್ಟಾನಗೊಳಿಸಿರುವ ಯೋಜನೆಯನ್ನು ಒಂದೇ ಕಡೆ ಇರಿಸಿಕೊಳ್ಳುವುದು ಸರಿಯಲ್ಲ’ ಎಂದು ಹೇಳಿದರು.

‘ತಾಲ್ಲೂಕಿನ ಪೆರ್ಜೇನಹಳ್ಳಿ ಕೆರೆಯಿಂದ ಎಸ್‌. ಅಗ್ರಹಾರ ದೊಡ್ಡ ಕೆರೆಗೆ ನೀರು ಹರಿಯಲಿದ್ದು, ಈ ಮಧ್ಯೆ ಆರೇಳು ಚೆಕ್‌ ಡ್ಯಾಂ ತುಬ ಬೇಕಿದೆ. ಇದರಿಂದ ಕೆರೆ ತುಂಬಲು 6-7 ವಾರಗಳು ಕಾಲಾವಕಾಶ ಬೇಕಾಗುತ್ತದೆ’ ಎಂದು ತಿಳಿಸಿದರು.

‘ಈಗ ಚಿಲ್ಲಪ್ಪನಹಳ್ಳಿ, ಮುದುವಾಡಿ ಹಾಗೂ ಎಸ್.ಅಗ್ರಹಾರ ಕೆರೆಗಳಿಗೆ ನೀರು ಹರಿಯುವ ಮೊದಲು ಸ್ವಚ್ಛಪಡಿಸಲು ಹಾಗೂ ಒತ್ತುವರಿಯಾಗಿರುವುದನ್ನು ತಡೆಯಲು ಫೆನ್ಸಿಂಗ್ ಮಾಡಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಯಾವ್ಯಾವ ಗ್ರಾಮಗಳಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಭೆ ನಡೆಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರಿಂದ ದೂರುಗಳು ಬಂದಿಲ್ಲ. ಇದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ಕಡಿಮೆಯಾಗಿದೆ. ಉಳಿದ ಕಡೆ ಕೊಳವೆಭಾವಿಗಳನ್ನು ಕೊರೆಸಬೇಕು’ ಎಂದು ಸಲಹೆ ನೀಡಿದರು.

ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಪೆಟ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.