ADVERTISEMENT

ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತರ ಬಲೆಗೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:54 IST
Last Updated 20 ಮಾರ್ಚ್ 2024, 15:54 IST
ಶಿವಾನಂದ ಕುಮಾರ್‌
ಶಿವಾನಂದ ಕುಮಾರ್‌   

ಕೋಲಾರ: ಇ–ಖಾತಾ ಮಾಡಿಕೊಡಲು ಲಂಚ ಪಡೆಯುವ ವೇಳೆ ತಾಲ್ಲೂಕಿನ ಅರೆಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಾನಂದ ಕುಮಾರ್‌ (55), ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಕೋಡಿಕಣ್ಣೂರು ಗ್ರಾಮದ ಎಂ.ನಾಗರಾಜು ಎಂಬುವರಿಂದ ಆರೋಪಿಯು ₹ 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಕೆ.ಉಮೇಶ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

‘ಕಾರ್ಯಾಚರಣೆಯಲ್ಲಿ ಹಣ ವಶಕ್ಕೆ ಪಡೆದು ಪಿಡಿಒ ಶಿವಾನಂದ ಕುಮಾರ್‌ ಎಂಬುವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಉಮೇಶ್‌ ತಿಳಿಸಿದರು.

ADVERTISEMENT

‘ಇ–ಖಾತಾ ವಿಚಾರವಾಗಿ ನಾಗರಾಜು ಎಂಬುವರು ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಪಿಡಿಒ ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾರ್ಚ್‌ 13ರಂದು ₹ 5 ಸಾವಿರ ನಗದು ಹಾಗೂ ಇನ್ನು ₹ 5 ಸಾವಿರವನ್ನು ಫೋನ್‌ ಪೇ ಮೂಲಕ ಪಡೆದುಕೊಂಡಿದ್ದರು. ಇನ್ನುಳಿದ ₹ 5 ಸಾವಿರ ನೀಡುವಂತೆ ಪದೇಪದೇ ಒತ್ತಾಯಿಸುತ್ತಿದ್ದರು. ಈ ಸಂಬಂಧ ನಾಗರಾಜು ದೂರು ನೀಡಿದ್ದರು. ಆ ದೂರಿನ ಮೇಲೆ ಬುಧವಾರ ದಾಳಿ ನಡೆಸಿದ್ದು, ಕಚೇರಿಯಲ್ಲಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಯಶವಂತಕುಮಾರ್‌, ಆಂಜನಪ್ಪ, ಸಿಬ್ಬಂದಿ ವಾಸು, ಸುಬ್ರಮಣಿ, ನಾಗವೇಣಿ, ಪವಿತ್ರಾ, ದ್ಯಾವಪ್ಪ ಹಾಗೂ ನಾಗಭೂಷಣ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.