ADVERTISEMENT

ವಿಷ ಕುಡಿದು ದಂಪತಿ ಆತ್ಮಹತ್ಯೆ: ಅನಾಥವಾದ ಏಳು ದಿನಗಳ ಹಸುಗೂಸು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 19:00 IST
Last Updated 7 ಡಿಸೆಂಬರ್ 2025, 19:00 IST
ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಅಸ್ಸಾಂ ಮೂಲದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಮನೆ ಮುಂದೆ ಸೇರಿದ್ದ ಜನ
ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಅಸ್ಸಾಂ ಮೂಲದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಮನೆ ಮುಂದೆ ಸೇರಿದ್ದ ಜನ    

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಏಳು ದಿನಗಳ ಹೆಣ್ಣು ಕೂಸು ಪಕ್ಕದಲ್ಲಿ ಮಲಗಿರುವಾಗಲೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಸ್ಸಾಂ ಮೂಲದ ಮಹಬೂಬ್‌ ರೆಹಮಾನ್‌ (30) ಹಾಗೂ ಫರೀದಾ ಖುರಮ್‌ (20) ದಂಪತಿ ಆತ್ಮಹತ್ಯೆ ಮಾಡಿಕೊಂಡವರು. ಇವರು 15 ದಿನಗಳ ಹಿಂದೆಯಷ್ಟೇ ಕೋಳಿಫಾರಂಗೆ ಕೂಲಿಗೆಂದು ಬಂದಿದ್ದರು. ಕೋಳಿಫಾರಂ ಆವರಣದಲ್ಲಿ ಇರುವ ಮನೆಯ ಬಾಗಿಲಿನ ಚಿಲುಕವನ್ನು ಒಳಗಡೆಯಿಂದ ಹಾಕಿಕೊಂಡು ಈ ಕೃತ್ಯ ಎಸಗಿಕೊಂಡಿದ್ದಾರೆ.

ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಪರಿಶೀಲಿಸಿದ ವೇಳೆ ಈ ಪ್ರಕರಣ ಗೊತ್ತಾಗಿದೆ.

ADVERTISEMENT

ಮೃತಪಟ್ಟ ತಂದೆ ತಾಯಿಯ ಮಧ್ಯೆ ಮಲಗಿದ್ದ ಮಗು ಪಿಳಿಪಿಳಿ ಕಣ್ಣು ಬಿಡುತ್ತಾ ಅಳುತ್ತಿತ್ತು. ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿತು. ಪೋಷಕರ ಆತ್ಮಹತ್ಯೆಯಿಂದ ಮಗು ಈಗ ಅನಾಥವಾಗಿದೆ.

ಮೃತ ದಂಪತಿಯನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಏಳು ದಿನಗಳ ಮಗುವನ್ನೂ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಹಸುಗೂಸು ಆರೋಗ್ಯವಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಮುಳಬಾಗಿಲು ವಲಯದ ಡಿವೈಎಸ್ಪಿ ಮನಿಷಾ, ಗೌನಿಪಲ್ಲಿ ವೃತ್ತದ ಪೊಲೀಸ್ ನಿರೀಕ್ಷಕ ಶಿವಕುಮಾರ್, ರಾಯಲ್ಪಾಡು ಪಿಎಸ್‍ಐ ರಾಮು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.