ADVERTISEMENT

ಕೋವಿಡ್‌: ಅನಾಥ ಮಕ್ಕಳಿಗೆ ನೆರವಾಗಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:33 IST
Last Updated 8 ಅಕ್ಟೋಬರ್ 2021, 15:33 IST
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕೋಲಾರದಲ್ಲಿ ಶುಕ್ರವಾರ ದಿನಸಿ ವಿತರಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಸಮಾಜ ಸೇವಕ ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಸ್ಪರ್ಶ ಟ್ರಸ್ಟ್‌ ನಿರ್ದೇಶಕ ಗೋಪಿನಾಥ್‌, ಜೆಎಸ್‍ಎಸ್ ಸಂಸ್ಥೆ ಸದಸ್ಯ ಲಕ್ಷ್ಮೀಶ್, ಸಿಡಿಪಿಒ ರಮೇಶ್ ಇದ್ದಾರೆ
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕೋಲಾರದಲ್ಲಿ ಶುಕ್ರವಾರ ದಿನಸಿ ವಿತರಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಸಮಾಜ ಸೇವಕ ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಸ್ಪರ್ಶ ಟ್ರಸ್ಟ್‌ ನಿರ್ದೇಶಕ ಗೋಪಿನಾಥ್‌, ಜೆಎಸ್‍ಎಸ್ ಸಂಸ್ಥೆ ಸದಸ್ಯ ಲಕ್ಷ್ಮೀಶ್, ಸಿಡಿಪಿಒ ರಮೇಶ್ ಇದ್ದಾರೆ   

ಕೋಲಾರ: ‘ಕೋವಿಡ್‌ನಿಂದ ಹಲವು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಸಂಘ ಸಂಸ್ಥೆಗಳು ಅಂತಹ ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಕುಟುಂಬಗಳಿಗೆ ಸ್ಪರ್ಶ ಟ್ರಸ್ಟ್, ಜೆಎಸ್‍ಎಸ್ ಹಾಗೂ ವಿ ಕೇರ್ ಸಂಸ್ಥೆ ವತಿಯಿಂದ ಇಲ್ಲಿ ಶುಕ್ರವಾರ ದಿನಸಿ ವಿತರಿಸಿ ಮಾತನಾಡಿ, ‘ಕೋವಿಡ್‌ ಮೊದಲ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಯಿತ್ತು. ಆದರೆ, 2ನೇ ಅಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಿತು’ ಎಂದು ಹೇಳಿದರು.

‘ಕೋವಿಡ್‌ 2ನೇ ಅಲೆಯಲ್ಲಿ ಹಲವು ಮಕ್ಕಳು ಒಬ್ಬರು, ಇಬ್ಬರು ಪೋಷಕರನ್ನು ಕಳೆದುಕೊಂಡರು. ಜಿಲ್ಲೆಯಲ್ಲಿ 6 ಮಕ್ಕಳು ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇಂತಹ ಮಕ್ಕಳಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡಬೇಕು. ಸಂಘ ಸಂಸ್ಥೆಗಳು ಈ ಮಕ್ಕಳಿಗೆ ಸೌಕರ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿವಿಧ 23 ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದಲ್ಲಿ 170 ಅಂಗನವಾಡಿ ಮತ್ತು 70 ಶಾಲೆ ಅಭಿವೃದ್ಧಿ, 300 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, 300 ಮಕ್ಕಳಿಗೆ ವಿದ್ಯಾರ್ಥಿನಿಲಯ ಸೌಕರ್ಯ ಒದಗಿಸಿದ್ದೇವೆ. ಇದೀಗ ಪಸ್ತುತ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ 2 ಸಾವಿರ ಬಡ ಮಕ್ಕಳನ್ನು ಗುರುತಿಸಿ ಅವರ ಕುಟುಂಬಕ್ಕೆ ಪ್ರತಿ ತಿಂಗಳು ದಿನಸಿ ವಿತರಣೆ ಮಾಡಲಾಗುತ್ತದೆ. ಜತೆಗೆ ಆ ಮಕ್ಕಳ ಶಿಕ್ಷಣ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದೇವೆ’ ಎಂದು ಸ್ಪರ್ಶ ಟ್ರಸ್ಟ್‌ ನಿರ್ದೇಶಕ ಗೋಪಿನಾಥ್ ವಿವರಿಸಿದರು.

‘ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ಸ್ವಾವಲಂಬಿಗಳಾಗಿಸಲು ನಾವೇ ಅವರ ಜವಾಬ್ದಾರಿ ಪಡೆದು ಶಿಕ್ಷಣ ಕೊಡಿಸುತ್ತೇವೆ’ ಎಂದು ಜೆಎಸ್‍ಎಸ್ ಸಂಸ್ಥೆ ಸದಸ್ಯ ಲಕ್ಷ್ಮೀಶ್ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಸಿಡಿಪಿಒ ರಮೇಶ್, ಸಮಾಜ ಸೇವಕ ಶಿವಣ್ಣ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.