ADVERTISEMENT

ವೇಮಗಲ್ | ‘ದಿತ್ವಾ’ ಚಂಡಮಾರುತ ಪರಿಣಾಮ ತೀವ್ರ ಚಳಿ: ಬೆಚ್ಚನೆಯ ಉಡುಪಿನ ಮೊರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:11 IST
Last Updated 2 ಡಿಸೆಂಬರ್ 2025, 7:11 IST
ಸದಾ ಜನಜಂಗುಳಿಯಿಂದ ತುಂಬಿರುವ ವೇಮಗಲ್‌ನ ನರಸಾಪುರ ಸರ್ಕಲ್‌ ತೀವ್ರ ಚಳಿಯಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿರುವುದು 
ಸದಾ ಜನಜಂಗುಳಿಯಿಂದ ತುಂಬಿರುವ ವೇಮಗಲ್‌ನ ನರಸಾಪುರ ಸರ್ಕಲ್‌ ತೀವ್ರ ಚಳಿಯಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿರುವುದು    

ವೇಮಗಲ್: ಹೋಬಳಿಯಾದ್ಯಂತ ಎರಡು–ಮೂರು ದಿನದಿಂದ ಮೋಡ ಕವಿದ ವಾತಾವರಣ ಹಾಗೂ ಚಳಿಗೆ ನಡುಗಿದ ಜನರು, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋದರು.

ಶ್ರೀಲಂಕಾದ ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದ ‘ದಿತ್ವಾ’ ಚಂಡಮಾರುತವು ತಮಿಳುನಾಡಿನ ಕರಾವಳಿ ತಲುಪಿದ ಪರಿಣಾಮ, ತಾಲ್ಲೂಕಿನಲ್ಲೂ ಚಳಿ ಹೆಚ್ಚಾಗಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಜಿಟಿಜಿಟಿ ಮಳೆ, ತೇವಾಂಶಯುಕ್ತ ಗಾಳಿ ಹಾಗೂ ಚಳಿಯಿಂದ ರಕ್ಷಿಸಿಕೊಳ್ಳಲು ಜನತೆ ಬೆಚ್ಚಗಿನ ವಸ್ತುಗಳ ಮೊರೆ ಹೋಗಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ದಿನದ ಸರಾಸರಿ ತಾಪಮಾನ ಕಡಿಮೆಯಾಗಿದ್ದು, ಮುಂಜಾನೆ ಮತ್ತು ತಡರಾತ್ರಿ ಶೀತ ಗಾಳಿ ಅಬ್ಬರ ಜೋರಾಗಿದೆ. ಹಾಗಾಗಿ ವೇಮಗಲ್ ಪಟ್ಟಣದಲ್ಲಿ ಬೆಚ್ಚಗಿನ ಉಡುಪು ದೊರೆಯುವ ಮಾರಾಟ ಮಳಿಗೆಗಳು ಜನ ದಟ್ಟಣೆಯಿಂದ ಕೂಡಿದ್ದು, ಭರ್ಜರಿ ವ್ಯಾಪಾರವಾಗುತ್ತಿದೆ. ಮಾರುಕಟ್ಟೆಯಲ್ಲಿ ಸ್ಪೆಟರ್, ಟೋಪಿ, ಕೈಗವಸು, ಮಫ್ಲರ್, ಜಾಕೆಟ್, ಕಂಬಳಿ, ಬೆಡ್‌ಶೀಟ್ ಮಾರಾಟವೂ ಜೋರಾಗಿದೆ. 

ADVERTISEMENT

ಚಳಿಯಿಂದ ದೈನಂದಿನ ಚಟುವಟಿಕೆಗಳು ಕುಂಠಿತವಾಗಿವೆ. ಮಾರುಕಟ್ಟೆಯು ತಡವಾಗಿ ಆರಂಭವಾಗುತ್ತಿದೆ. ಶಾಲಾ ಮಕ್ಕಳು ಹಾಗೂ ವೃದ್ಧರಿಗೆ ತೀವ್ರ ಸಂಕಷ್ಟವಾಗಿದೆ. ಸಣ್ಣಪುಟ್ಟ ಅಂಗಡಿ, ತಳ್ಳುವಗಾಡಿ ವ್ಯಾಪಾರಿ ಮತ್ತು ದಿನಸಿ ಅಂಗಡಿಗಳ ವ್ಯಾಪಾರ ವಹಿವಾಟು ಗಣನೀಯವಾಗಿ ಕಡಿಮೆಯಾಗಿದೆ.

ಹವಾಮಾನ ಬದಲಾವಣೆ

ಆರೋಗ್ಯದ ಮೇಲೆ ಪರಿಣಾಮ ಬದಲಾದ ಹವಾಮಾನದಿಂದಾಗಿ ನೆಗಡಿ ಕೆಮ್ಮು ಜ್ವರ ಮತ್ತು ಅಸ್ತಮಾ ಸಂಬಂಧಿಸಿದ ತೊಂದರೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಬೆಚ್ಚಗಿನ ನೀರನ್ನು ಕುಡಿಯಿರಿ. ಮೈ ಬೆಚ್ಚಗೆ ಇರಿಸಿಕೊಳ್ಳುವುದು ಮತ್ತು ಬಿಸಿ ಆಹಾರ ಸೇವನೆ ಈ ಸಮಯದಲ್ಲಿ ಸೂಕ್ತ. ವೃದ್ಧರು ಮತ್ತು ಚಿಕ್ಕ ಮಕ್ಕಳು ಮನೆಯೊಳಗೆ ಇರುವುದು ಸುರಕ್ಷಿತ. ಉಸಿರಾಟ ತೊಂದರೆ ಉಂಟಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಎಂದು ವೇಮಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ರವಿಕಿರಣದ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.