ADVERTISEMENT

ಉದ್ಯಮಶೀಲತೆಗೆ ಕಾಯಕ ಯೋಜನೆ

ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:08 IST
Last Updated 11 ಜನವರಿ 2021, 2:08 IST
ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು
ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು   

ಕೋಲಾರ: ಇ- ಶಕ್ತಿ ಮಹಿಳಾ ಶಕ್ತಿಯಾದರೆ, ಕಾಯಕ ಯೋಜನೆ ಅವರನ್ನು ಸ್ವಾವಲಂಬಿ ಉದ್ಯಮಶೀಲರನ್ನಾಗಿ ಮಾಡುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರು, ಇ-ಶಕ್ತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.

ಇ-ಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಿ ಪಾರದರ್ಶಕತೆಗೆ ಕಾರಣವಾಗುವುದರಿಂದ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ. ಎರಡು ದಿನದೊಳಗೆ ನಬಾರ್ಡ್ ಸೂಚಿಸಿರುವ ಎಲ್ಲ 7ಸಾವಿರ ಮಹಿಳಾ ಸಂಘಗಳ ಮಾಹಿತಿ ಅಪ್‍ಲೋಡ್ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಸಭೆಯಲ್ಲಿ ಇ-ಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಜ. 26ಕ್ಕೆ ಶೇ 100 ಗಣಕೀಕರಣ ಮಾಡಿ: ಸೊಸೈಟಿಗಳು ಶೇ 90 ರಷ್ಟು ಗಣಕೀಕರಣವಾಗಿದೆ. ವಹಿವಾಟು ಕೇವಲ 60ರಷ್ಟು ಮಾತ್ರ ಮಾಡುತ್ತಿದ್ದಾರೆ. ಆದ್ದರಿಂದ ಜ.26 ರೊಳಗೆ ಶೇ100 ಗಣಕೀಕರಣ ಮತ್ತು ಆನ್‍ಲೈನ್ ವಹಿವಾಟು ನಡೆಯಬೇಕು ಎಂದು ಸೂಚಿಸಿದರು.

ಕಾಯಕ ಯೋಜನೆ: ಕಾಯಕ ಯೋಜನೆಯಡಿ ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲ ಮತ್ತು ಬಡ್ಡಿಯ ₹5 ಲಕ್ಷ ಸಾಲ ಭದ್ರತೆ ಇಲ್ಲದೇ ಸಿಗುತ್ತದೆ. ಹೈನುಗಾರಿಕೆ, ಮಿನಿಡೇರಿ ಆರಂಭಿಸಿ ಉದ್ಯಮಶೀಲರಾದರೆ ಅವರ ಬದುಕನ್ನು ಯೋಜನೆ ಕಾಯುತ್ತದೆ ಎಂದರು.

ಬ್ಯಾಂಕ್ ಎಲ್ಲ ವಿಷಯಗಳಲ್ಲೂ ಸಾಧನೆ ಮಾಡಿದೆ. ಆದರೆ ಠೇವಣಿ ಸಂಗ್ರಹದಲ್ಲಿ ಹಿಂದುಳಿದಿದೆ. ಮಾರ್ಚ್ ವೇಳೆಗೆ ₹700 ಕೋಟಿ ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಿ ಎಂದರು.

ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿಯಾಗಿದೆ. ಅವರಂತೆ ಅಂದಿನ ವಹಿವಾಟು ಅಂದೇ ಆನ್‍ಲೈನ್‍ಗೆ ದಾಖಲಿಸುವ ಮೂಲಕ ಕೆಲಸದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ವಿಮರ್ಶೆ, ಠೇವಣಿ ಸಂಗ್ರಹ ಪ್ರಗತಿ ಪರೀಶೀಲನೆ, ಇ-ಶಕ್ತಿ ಯೋಜನೆ ಪ್ರಗತಿ, ಸ್ವಸಹಾಯ ಸಂಘಗಳು, ಕೆಸಿಸಿ, ಮಧ್ಯಮಾವಧಿ ಸಾಲಗಳ ಬಡ್ಡಿ ಸಹಾಯಧನ ಕ್ಲೈಮ್ ಬಿಲ್ಲುಗಳ ಕುರಿತು ಮತ್ತು ಸಹಕಾರ ಸಂಘಗಳ ಗಣಕೀಕರಣ ಪ್ರಗತಿ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂ ಬೈರೇಗೌಡ, ಖಲೀಮುಲ್ಲಾ, ಹುಸೇನ್‍ಸಾಬ್ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.