ADVERTISEMENT

ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ಮಾನನಷ್ಟ ಮೊಕದ್ದಮೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 15:24 IST
Last Updated 28 ಆಗಸ್ಟ್ 2021, 15:24 IST

ಕೋಲಾರ: ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡರು ಎಚ್.ಮಲ್ಲಂಡಹಳ್ಳಿ ಡೇರಿ ಚುನಾವಣೆ ವಿಷಯದಲ್ಲಿ ಅಪಪ್ರಚಾರ ನಡೆಸುತ್ತಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಪ್ರಾಥಮಿಕ ಹಾಲು ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್‌ವರೆಗೆ ಮುಂದೂಡಿದೆ. ಹೀಗಾಗಿ ಎಚ್.ಮಲ್ಲಂಡಹಳ್ಳಿ ಸಂಘದ ಚುನಾವಣೆ ಸಹ ನಡೆದಿಲ್ಲ. ಆದರೂ ಚುನಾವಣೆ ನಡೆಸುವಂತೆ ಅಥವಾ 18 ಬಿ ವಿನಾಯಿತಿ ನೀಡುವಂತೆ ತಾನು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದ್ದಾರೆ.

ತಾನು ಕೈ ಬಾಯಿ ಶುದ್ಧವಾಗಿರಿಸಿಕೊಂಡು ಹಾಲು ಒಕ್ಕೂಟದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆ ಎಂದು ಭಾವಿಸಿದ್ದೇನೆ. ತನ್ನ ರಾಜಕೀಯ ಏಳಿಗೆ ಸಹಿಸದ ರಾಮಕೃಷ್ಣಗೌಡರು ಕೆಲ ಮುಖಂಡರ ಹುನ್ನಾರದಿಂದ ಎಚ್.ಮಲ್ಲಂಡಹಳ್ಳಿ ಡೇರಿ ವಿಷಯದಲ್ಲಿ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಆರೋಪಗಳೆಲ್ಲಾ ಸತ್ಯಕ್ಕೆ ದೂರ ಎಂದು ಕಿಡಿಕಾರಿದ್ದಾರೆ.

ADVERTISEMENT

ಸರ್ಕಾರ ಚುನಾವಣೆ ನಡೆಸಿದರೆ ತಾನು ಸಿದ್ಧವಿದ್ದೇನೆ. 18ಬಿ ವಿನಾಯಿತಿ ನೀಡಿದರೆ ಅದಕ್ಕೂ ಬದ್ಧನಾಗಿದ್ದೇನೆ. ರಾಮಕೃಷ್ಣೇಗೌಡರು ರಾಜಕೀಯ ದುರುದ್ದೇಶಕ್ಕೆ ಮನಬಂದಂತೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಗೌರವಯುತವಾಗಿ ಬದುಕುತ್ತಿರುವ ತನ್ನನ್ನು ರಾಜಕೀಯವಾಗಿ ಎದುರಿಸಲಾಗದೆ ಹತಾಶರಾಗಿರುವ ರಾಮಕೃಷ್ಣೇಗೌಡರು ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.