ಕೋಲಾರ: ತಮ್ಮ ಬಹುನಿರೀಕ್ಷೆಯ ಕೆ.ಡಿ (KD) ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದ್ದು, ನಾಯಕ ನಟ ಧ್ರುವ ಸರ್ಜಾ ದೇವರ ಮೊರೆ ಹೋಗಿದ್ದಾರೆ.
ಕೋಲಾರ ತಾಲ್ಲೂಕಿನ ಕೋರಗಂಡನಹಳ್ಳಿಯ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ವಿಶೇಷ ಹೋಮ, ಪೂಜೆ ನೆರವೇರಿಸಿದ್ದಾರೆ. ದೇವಾಲಯದಲ್ಲಿ ಅಮಾವಾಸ್ಯೆ ಪೂಜೆಯಲ್ಲಿ ಭಾಗಿಯಾಗಿದ್ದರು. ಕಾಲಬೈರವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು, ರುದ್ರಾಭಿಷೇಕ ನಡೆಯಿತು.
ಈ ದೇಗುಲ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಧ್ರುವ ಸರ್ಜಾ ಅವರ ಜೊತೆಯಲ್ಲಿ ಬೆಂಗಳೂರು ಪೂರ್ವ ವಲಯದ ಡಿಸಿಪಿ ಡಿ.ದೇವರಾಜ್ ಇದ್ದರು. ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಮುತ್ತಿಕೊಂಡರು, ಸೆಲ್ಫಿ ಹಾಗೂ ಆಟೊಗ್ರಾಫ್ಗೆ ಮುಗಿಬಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವ ಸರ್ಜಾ, ‘ಅಮಾವಾಸ್ಯೆ ಕಾರಣ ಹೋಮ ಪೂಜೆ ಸಲ್ಲಿಸಲು ಬಂದಿದ್ದೇನೆ. ಶಿವಕುಮಾರ ಸ್ವಾಮೀಜಿ ನೇತ್ವದಲ್ಲಿ ಪೂಜಾ ಕಾರ್ಯ ಚೆನ್ನಾಗಿ ನಡೆದಿದೆ. ಭಗವಂತನ ಅನುಗ್ರಹ ಇಲ್ಲದೆ ಏನೂ ನಡೆಯಲ್ಲ. ದೇವರಾಜ್ ಅವರಿಂದ ಈ ದೇಗುಲ ಗೊತ್ತಾಯಿತು’ ಎಂದರು.
‘ಕೆ.ಡಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ಘೋಷಿಸಲಾಗುವುದು. ಇದೊಂದು ಕಮರ್ಷಿಯಲ್ ಸಿನಿಮಾ. ನಾನು ಇಲ್ಲಿಗೆ ಸಿನಿಮಾ ಪ್ರಚಾರ ಮಾಡಲು ಬಂದಿಲ್ಲ’ ಎಂದು ನುಡಿದರು.
‘ದೇಗುಲಕ್ಕೆ ಭೇಟಿ ನೀಡಿದ್ದರಿಂದ ಸಕಾರಾತ್ಮಕ ವೈಬ್ಸ್ ಸಿಕ್ಕಿದೆ. ಎಲ್ಲರಿಗೂ ಕಷ್ಟ ಸುಖ ಇರುತ್ತದೆ. ಸುಖವನ್ನು ಎಲ್ಲರ ಬಳಿ ಹೇಳಿಕೊಳ್ಳಬಹುದು. ಭಗವಂತನ ಬಳಿ ಮಾತ್ರ ಕಷ್ಟ ಹೇಳಿಕೊಳ್ಳಲು ಸಾಧ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.