ADVERTISEMENT

ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೇಳಿಲ್ಲ, ಬದಲಾವಣೆ ಕೋರಿಲ್ಲ: ಸಚಿವ ಜಾರಕಿಹೊಳಿ

ನಾವು ಕಾಂಗ್ರೆಸ್‌ ಪರ ಕೆಲಸ ಮಾಡುವ ಆರ್ಮಿ: ಸಚಿವ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 14:24 IST
Last Updated 15 ಫೆಬ್ರುವರಿ 2025, 14:24 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಕೋಲಾರ: ‘ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ನಾನು ಕೇಳಿಯೂ ಇಲ್ಲ, ಬದಲಾಗಬೇಕೆಂದು ಹೇಳಿಯೂ ಇಲ್ಲ. ಆ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ಈ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 2028ಕ್ಕೆ ಮತ್ತೆ ಪಕ್ಷ ಅಧಿಕಾರ ಹಿಡಿಯಬೇಕೆಂಬ ಉದ್ದೇಶ ನಮ್ಮದು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ಕಾಂಗ್ರೆಸ್ ಪಕ್ಷದ ಆರ್ಮಿ ರೀತಿ ಕೆಲಸ ಮಾಡುವವರೇ ಹೊರತು ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಪರ ಆರ್ಮಿ ರೀತಿ ಕೆಲಸ ಮಾಡುವವರಲ್ಲ’ ಎಂದರು.

ಒಬ್ಬರಿಗೆ ಒಂದೇ ಹುದ್ದೆ ಇರಬೇಕು ಎನ್ನುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಸಚಿವ ರಾಜಣ್ಣ ಪ್ರಸ್ತಾಪಿಸಿದ್ದಾರೆ ಎಂಬುದಕ್ಕೆ, ‘ನಾನು ಈ ವಿಚಾರ ಹೇಳಿದ್ದೇನೆಯೇ? ಮಾಧ್ಯಮದವರು ರಾಜಣ್ಣ ಅವರನ್ನೇ ಈ ಪ್ರಶ್ನೆ ಕೇಳಬೇಕು. ಅವರು ಯಾರ ಜೊತೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಹೇಳಿದರು.

ADVERTISEMENT

ಸಿದ್ದರಾಮಯ್ಯ ಪೂರ್ಣ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಆ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಅವರನ್ನು ನಾನು ಮುಖ್ಯಮಂತ್ರಿ ಮಾಡಿದ್ದೇನೆಯೇ? ನನ್ನ ವ್ಯಾಪ್ತಿ ಬಿಟ್ಟು ಏನನ್ನೂ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಮಾತನಾಡಿದ ಮೇಲೆ ನಾನೇನು ಮಾತನಾಡುವುದಿದೆ? ಅವರು ಹೇಳಿದ್ದನ್ನು ನಾನೂ ಪತ್ರಿಕೆಯಲ್ಲಿ ಓದಿದ್ದೇನೆ ಅಷ್ಟೆ’ ಎಂದರು.

‘2028ರಲ್ಲಿ ಮತ್ತೆ ಅಧಿಕಾರ ಹಿಡಿದ ಮೇಲೆ ಮುಖ್ಯಮಂತ್ರಿ ವಿಚಾರ ಚರ್ಚಿಸಲಾಗುತ್ತದೆ. ಹೀಗಾಗಿ, ಆಗ ಮುಖ್ಯಮಂತ್ರಿ ಆಗುವ ಬಗ್ಗೆ ಚರ್ಚಿಸೋಣ. ಸದ್ಯಕ್ಕೆ ನನ್ನ ಪ್ರಯತ್ನವಿಲ್ಲ’ ಎಂದು ತಿಳಿಸಿದರು.

‘ದಲಿತರ ಸಮಾವೇಶ ಆಯೋಜನೆ ಕುರಿತು ಸಚಿವ ರಾಜಣ್ಣ ದೆಹಲಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ ಚರ್ಚಿಸಿ ಮಾತನಾಡುವೆ’ ಎಂದರು.

‘ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಕಠಿಣ ಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.