ADVERTISEMENT

ದರಖಾಸ್ತು ದಾಖಲಾತಿ; ಎಚ್ಚರ ವಹಿಸಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 3:03 IST
Last Updated 18 ಜೂನ್ 2020, 3:03 IST
ಬಂಗಾರಪೇಟೆಯಲ್ಲಿ ಕರ್ನಾಟಕ ದಲಿತ ರೈತ ಸೇನೆ ಸದಸ್ಯರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಉಳಿಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು
ಬಂಗಾರಪೇಟೆಯಲ್ಲಿ ಕರ್ನಾಟಕ ದಲಿತ ರೈತ ಸೇನೆ ಸದಸ್ಯರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಉಳಿಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು   

ಬಂಗಾರಪೇಟೆ: ದರಖಾಸ್ತು ಮೂಲಕ ಮಂಜೂರಾತಿ ಆಗಿರುವ ಕಡತದ ದಾಖಲೆಗಳನ್ನು ಪರಿಶೀಲಿಸಿ, ನಮೂನೆ-1ರಿಂದ 5ರಲ್ಲಿ ನೈಜ ವರದಿ ದಾಖಲು ಮಾಡಬೇಕು. ಅನಗತ್ಯ ಅಂಶಗಳನ್ನು ದಾಖಲು ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ದರಖಾಸ್ತು ಮೂಲಕ ಮಂಜೂರಾದ ಖಡತಗಳಲ್ಲಿನ ವಿವರ ದಾಖಲು ಮಾಡುವ ಬಗ್ಗೆ ರಾಜಸ್ವ ನಿರೀಕ್ಷಕರ, ಗ್ರಾಮ ಲೆಕ್ಕಿಗರ ಹಾಗೂ ಸಿಬ್ಬಂದಿಗೆ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಮೂಲ ಮಂಜೂರಾತಿ ಕಡತದಲ್ಲಿರುವಂತೆ ಒಂದೇ ಒಂದು ಅಂಶವನ್ನೂ ಕಡೆಗಣಿಸದೆ ಎಚ್ಚರಿಕೆಯಿಂದ ನಮೂನೆ ಭರ್ತಿ ಮಾಡಬೇಕು. ಸ್ವಂತ ಅಭಿಪ್ರಾಯ ಅಥವಾ ಸುಳ್ಳು ಮಾಹಿತಿ ನಮೂದು ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಸಂಶಯಗಳಿದ್ದರೆ ಬಗೆಹರಿಸಿಕೊಂಡ ಬಳಿಕವೇ ದಾಖಲು ಮಾಡಬೇಕು. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯಲ್ಲಿ ವಾರಕ್ಕೆ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ದಾಖಲಾತಿ ಮಾಡಬೇಕು. ಆ ಸಂದರ್ಭ ರಾಜಸ್ವ ನಿರೀಕ್ಷಕರು ಮತ್ತು ಸಿಬ್ಬಂದಿ ಮೇಲುಸ್ತುವಾರಿ ವಹಿಸಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ADVERTISEMENT

ಭೂ ದಾಖಲೆ ವಿಭಾಗದ ಜಿಲ್ಲಾ ಉಪ ನಿರ್ದೇಶಕ ಇ.ಗೋಪಾಲಯ್ಯ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹ
ಶೀಲ್ದಾರ್ ಚಂದ್ರಮೌಳೇಶ್ವರ, ಕೆಜಿಎಫ್ ತಹಶೀಲ್ದಾರ್ ರಮೇಶ್, ಭೂ ದಾಖಲೆ ವಿಭಾಗದ ಸಹಾಯಕ ನಿರ್ದೇಶಕ ರಮೇಶ್ , ಗೋಪಾಲ್ ಇದ್ದರು.

ಜಿಲ್ಲಾಧಿಕಾರಿಗೆ ದೂರು

ಬಂಗಾರಪೇಟೆ ಚಿಕ್ಕವಲಗಮಾದಿ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಚರಂಡಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇವರಿಗೆ ಕಸಬಾ ರಾಜಸ್ವ ನಿರೀಕ್ಷಕರು ಸಹಾಯ ಮಾಡುತ್ತಿರುವ ಕಾರಣ ಸರ್ವೆ ಕಾರ್ಯ ನಡೆಯುತ್ತಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಉಳಿಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದರು. ಕರ್ನಾಟಕ ದಲಿತ ರೈತ ಸೇನೆಯ ಹುಣಸನಹಳ್ಳಿ ವೆಂಕಟೇಶ್, ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.