ADVERTISEMENT

ಬಿಜೆಪಿ ಅಭ್ಯರ್ಥಿ ಪರ ಪ್ರಚಾರ: ಕಾಂಗ್ರೆಸ್‌ನಿಂದ ಎಂಟು ಜನರ ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 12:19 IST
Last Updated 17 ಏಪ್ರಿಲ್ 2019, 12:19 IST

ಕೋಲಾರ: ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ನ ಮೂವರು ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ 8 ಮಂದಿಯನ್ನು ಪಕ್ಷದಿಂದ ಬುಧವಾರ ಉಚ್ಛಾಟಿಸಲಾಗಿದೆ.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವಣಿ ಕ್ಷೇತ್ರದ ಜಿ.ಪಂ ಸದಸ್ಯ ಆರ್‌.ಕೃಷ್ಣಪ್ಪ, ಬೈರಕೂರು ಕ್ಷೇತ್ರದ ಎಚ್‌.ಎನ್‌.ಪ್ರಕಾಶ್‌ ರಾಮಚಂದ್ರ, ಪದ್ಮಘಟ್ಟ ಕ್ಷೇತ್ರದ ಎನ್‌.ನಾಗಮಣಿ ಅವರನ್ನು ಉಚ್ಛಾಟಿಸಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ, ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸದಸ್ಯ ಎ.ವಿ.ಶ್ರೀನಿವಾಸ್‌, ಮುಳಬಾಗಿಲು ಎಪಿಎಂಸಿ ಸದಸ್ಯ ವಿವೇಕಾನಂದ, ಮುಳಬಾಗಿಲು ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ ಅಧ್ಯಕ್ಷ ಗಂಗಿರೆಡ್ಡಿ, ಸ್ಥಳೀಯ ಮುಖಂಡರಾದ ಮಂಜು ಮತ್ತು ಶ್ರೀನಾಥ್‌ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ADVERTISEMENT

ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ಬಣದಲ್ಲಿ ಗುರುತಿಸಿಕೊಂಡಿರುವ ಈ 8 ಮಂದಿಯೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪರ ವಿರುದ್ಧ ಸಿಡಿದೆದ್ದು, ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಪರ ಪ್ರಚಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.