ADVERTISEMENT

ಕೋಲಾರ | ಮೀನು ಸಾಕಣೆ; ಪ್ರತಿ ಜಿಲ್ಲೆಯಲ್ಲಿ ಮೂರು ಹಂತವಾಗಿ ವಿಂಗಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 16:49 IST
Last Updated 12 ಜುಲೈ 2023, 16:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲಾರ: ‌‘ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೀನು ಸಾಕಣೆಯನ್ನು ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿ ಮೂರು ಹಂತವಾಗಿ ವಿಂಗಡಿಸಿದರೆ ರೈತರು ಮೀನುಗಾರಿಕೆಯನ್ನು ಸಹ ಉಪ ಕಸುಬಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸಲಹೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಬುಧವಾರ ಅವರು ಮಾತನಾಡಿ, ‘ಮೀನುಗಾರಿಕೆ ಇಲಾಖೆಯವರು ಎರಡು ಭಾಗಗಳಾಗಿ ವಿಂಗಡಿಸಿ 40 ಹೆಕ್ಟೇರ್‌ಗಿಂತ ಕಡಿಮೆ ಇದ್ದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು 40 ಹೆಕ್ಟೇರ್‌ಗಿಂತ ಹೆಚ್ಚಿದ್ದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ಮೀನು ಸಾಕಾಣಿಕೆ ನಿರ್ವಹಿಸುವುದು ಹಾಗೂ 300 ಹೆಕ್ಟೇರ್‌ಗಿಂತ ಮೇಲಿದ್ದರೆ ಸೊಸೈಟಿಗಳಿಗೆ ಐದು ವರ್ಷಕ್ಕೆ ಗುತ್ತಿಗೆ ನೀಡುವುದು, ಅದಕ್ಕಿಂತ ಹೆಚ್ಚಿದ್ದಲ್ಲಿ ಇ- ಟೆಂಡರ್ ಕರೆದು ಕಾರ್ಯನಿರ್ವಹಿಸುವ ಪದ್ಧತಿ ಇದೆ’ ಎಂದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೀನು ಸಾಕಾಣಿಕೆಯನ್ನು ಮೂರು ಹಂತವಾಗಿ ವಿಂಗಡಿಸಿದ್ದು, ಕೋಲಾರ ಜಿಲ್ಲೆಯಲ್ಲಿ ಮಾರ್ಕಂಡೇಯ ಜಲಾಶಯ ಬಳಿ ಪ್ರೊಡಕ್ಷನ್ ಫಾರಂಅನ್ನು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನರ್ಸಿಂಗ್‌ಅನ್ನು, ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿಯಲ್ಲಿ ರೇರಿಂಗನ್ನು ನಡೆಸಲಾಗುತ್ತಿದೆ. ಈ ಮೂರು ಹಂತಗಳು ಎರಡೂ ಜಿಲ್ಲೆಗಳಲ್ಲಿ ಸೇರಿ ನಡೆಸಲಾಗುತ್ತಿದೆ. ಈ ಮೂರು ಹಂತ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ನಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಉತ್ತರಿಸಿ, ಸದಸ್ಯರು ನೀಡಿರುವ ಸಲಹೆಯನ್ನು ಪರಿಶೀಲಿಸಿ ಇಲಾಖೆಯ ಅಧಿಕಾರಿಗಳನ್ನು ಮತ್ತು ಜಿಲ್ಲೆಯ ಶಾಸಕರೊಂದಿಗೆ ಶೀಘ್ರವಾಗಿ ಸಭೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.