ಮುಳಬಾಗಿಲು: ಇಲ್ಲಿನ ಡಿ.ವಿ. ಗುಂಡಪ್ಪ ಸರ್ಕಾರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಅಶೋಕ್ ಭಟ್, ಶಾಲೆಯಲ್ಲಿನ ವಾತಾವರಣವನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ‘ಡಿ.ವಿ. ಗುಂಡಪ್ಪ ಸರ್ಕಾರಿ ಶಾಲೆಯು ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ಪಡೆದಿದ್ದು, ಎಲ್ಲ ಶಾಲೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಶಾಲೆಗಳ ಬಗ್ಗೆ ಜನರ ಮನಸ್ಸಿನಲ್ಲಿ ಉದಾಸೀನತೆಯ ಭಾವನೆ ಇರುತ್ತದೆ. ಇಂಥ ಸಮಯದಲ್ಲಿ ಡಿವಿಜಿ ಅವರ ಮನೆಯನ್ನೇ ದಾನಿಗಳ ಸಹಾಯದಿಂದ ಸ್ಮಾರಕ ಶಾಲೆಯಾಗಿ ನಿರ್ಮಿಸಲಾಗಿದೆ’ ಎಂದು ಕೊಂಡಾಡಿದರು.
ಡಿವಿಜಿ ಅವರು ಮಂಕುತಿಮ್ಮನ ಕಗ್ಗದಿಂದಲೇ ಖ್ಯಾತಿ ಪಡೆದವರಾಗಿದ್ದಾರೆ. ಅಂತಹ ಸಾಧಕ ವಾಸವಿದ್ದ ಮನೆಯನ್ನು ಶಾಲೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕೊರತೆ ನೆಪದಲ್ಲಿ ನಾನಾ ಕಡೆ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮುಳಬಾಗಿಲಿನ ಡಿ.ವಿ. ಗುಂಡಪ್ಪ ಅವರ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.
ಯಲ್ಲಪ್ಪ ಮಾತನಾಡಿ, ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಒಬ್ಬ ಶಿಕ್ಷಕ ಸಕ್ರಿಯವಾಗಿ ತನ್ನ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದರೆ, ಡಿವಿಜಿ ಶಾಲೆಯಂತೆ ಮಾಡಬಹುದು ಎಂದರು.
ಮುಖ್ಯ ಶಿಕ್ಷಕ ಸೊಣ್ಣಪ್ಪ, ಎಸ್.ಕೆ.ಪದ್ಮಾವತಿ, ಆರ್.ಶಾರದ, ಆರ್.ಭಾರತಿ, ಎಂ.ಮಂಜುಳ, ಭಾಗ್ಯಶ್ರೀ, ಸಲ್ಮ, ಕವಿತ, ಎಸ್.ಎನ್.ಭಾಗ್ಯ, ಅರುಣ್ ಕುಮಾರಿ, ದೀಪ, ನಂದಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.