ಕೋಲಾರ: ‘ಮಹಾತ್ಮ ಗಾಂಧೀಜಿ ಹತ್ಯೆ ದಿನದ ಅಂಗವಾಗಿ ನಗರದಲ್ಲಿ ಜ.30ರಂದು ಸೌಹಾರ್ದತೆಗಾಗಿ ಕರ್ನಾಟಕ ಹೆಸರಿನಲ್ಲಿ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ಮೌನ ಮೆರವಣಿಗೆ ಸಂಬಂಧ ಇಲ್ಲಿ ಬುಧವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ‘ದೇಶದಲ್ಲಿ ಅಂಬೇಡ್ಕರ್ ಹಾಗೂ ಕಾರ್ಲ್ ಮಾರ್ಕ್ಸ್ಗೆ ಇರುವಷ್ಟು ಅನುಯಾಯಿಗಳು ಗಾಂಧೀಜಿಗೆ ಇಲ್ಲ. ಗಾಂಧೀಜಿಯಿಂದ ಲಾಭ ಪಡೆದು ಇಪ್ಪೆ ಮಾಡಿ ಮೂಲೆಗುಂಪು ಮಾಡಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಜನರ ಮನಸ್ಸಿನಲ್ಲಿ ಗಾಂಧೀಜಿ ನೆಲೆಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಗಾಂಧೀಜಿಯವರ ಮುಖವಾಡ ತೊಡಿಸಿ ಗಾಂಧಿವನದಿಂದ ನಚಿಕೇತನ ವಿದ್ಯಾರ್ಥಿನಿಲಯದವರೆಗೆ ಮೌನ ಮೆರವಣಿಗೆ ನಡೆಸಲಾಗುತ್ತದೆ’ ಎಂದು ವಿವರಿಸಿದರು.
‘ದೇಶದಲ್ಲಿ ಒಬ್ಬ ಗಾಂಧೀಜಿಯನ್ನು ಕೊಂದಿರಬಹುದು. ನಾವೆಲ್ಲಾ ನೂರಾರು ಗಾಂಧೀಜಿ ಎಂಬ ಸಂದೇಶವನ್ನು ಜನರಿಗೆ ಸಾರಬೇಕಿದೆ. ನಮ್ಮ ಆಲೋಚನೆಗಳು ವ್ಯರ್ಥವಾಗದ ರೀತಿಯಲ್ಲಿ ಮುಂದಿನ ಭವಿಷ್ಯವನ್ನು ಕಾಣಬೇಕಿದೆ’ ಎಂದು ಕಿವಿಮಾತು ಹೇಳಿದರು.
‘ಕನ್ನಡ ನಾಡು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಶತಮಾನಗಳಿಂದ ಹೆಸರುವಾಸಿಯಾಗಿತ್ತು. ಸರ್ವ ಜನಾಂಗದ ಶಾಂತಿಯ ತೋಟವೆಂಬ ಪರಂಪರೆ ನಾಶವಾಗಿ ಕೋಮುವಾದಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ಈ ಸಮಾಜಘಾತುಕ ಶಕ್ತಿಗಳ ವಿರುದ್ಧ ಸೌಹಾರ್ದತೆಗಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಭಾರತೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಶ್, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.