ಬಂಗಾರಪೇಟೆ: ಚಿನ್ನ ಖರೀದಿಸುವ ನೆಪದಲ್ಲಿ ಬಂದ ನಾಲ್ವರು ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ₹40 ಲಕ್ಷ ಮೌಲ್ಯದ 400 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿರುವ ಘಟನೆ ಗುರುವಾರ ಬಂಗಾರಪೇಟೆಯಲ್ಲಿ ನಡೆದಿದೆ.
ಪಟ್ಟಣದ ಗೀತಾಮಂದಿರ ರಸ್ತೆಯಲ್ಲಿರುವ ಶ್ರೀನಿವಾಸಗುಪ್ತ ಎಂಬುವರ ಅಂಗಡಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಾಲ್ಕು ಚಕ್ರದ ವಾಹನದಲ್ಲಿ ಬಂದ ನಾಲ್ವರು ಚಿನ್ನ ಖರೀದಿಸುವ ನೆಪದಲ್ಲಿ ಅದು ತೋರಿಸಿ, ಇದು ತೋರಿಸಿ ಎಂದು ಹೇಳುತ್ತಾ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು 400 ಗ್ರಾಂ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಅಂಗಡಿ ಮಾಲೀಕ ಆಭರಣಗಳನ್ನು ಪರಿಶೀಲಿಸಿದಾಗ 400 ಗ್ರಾಂ ತೂಕದ ಆಭರಣಗಳು ಕಾಣೆಯಾಗಿದ್ದು, ಈ ಸಂಬಂಧ ಬಂಗಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಜಿಎಫ್ ಪೋಲಿಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.