ಶ್ರೀನಿವಾಸಪುರ: ಪರಿಶಿಷ್ಟ ಜಾತಿಯ ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಗೋಡಂಬಿ ಬೆಳೆಯುವುದರ ಮೂಲಕ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೊಗಳಗೆರೆ ತೊಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಆರ್.ಕೆ. ರಾಮಚಂದ್ರ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ಹಾಗೂ ಹೊಗಳಗೆರೆ ತೊಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಮಂಗಳವಾರ ಏರ್ಪಡಿಸಿದ್ದ ಗೇರು ಕೃಷಿ ಕುರಿತ ರೈತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಗೆ ಸೇರಿದ ರೈತರಿಗೆ ಗೇರು ಕೃಷಿ ಕೈಗೊಳ್ಳಲು ವಿವಿಧ ಸೌಲಭ್ಯ ನೀಡುವುದರ ಜತೆಗೆ, ತಾಂತ್ರಿಕ ಸಲಹೆ ನೀಡಲಾಗುವುದು. ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದು ಹೆಚ್ಚು ಕ್ಷೇಮಕರ. ತೇವಾಂಶದ ಕೊರತೆ ಇರುವ ಪ್ರದೇಶಗಳಿಗೆ ಗೇರು ಸೂಕ್ತ ಎಂಬುದನ್ನು ಮನಗಾಣಬೇಕು. ಒಮ್ಮೆ ನಾಟಿ ಮಾಡಿದರೆ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಫಸಲು ನೀಡುತ್ತದೆ ಎಂದು ಹೇಳಿದರು.
ಗೋಡಂಬಿ ಬೆಳೆಯಲ್ಲಿ ಸಸ್ಯಾಭಿವೃದ್ಧಿ ವಿಧಾನಗಳು, ಸಂಕರಣ ತಳಿಗಳು ಮತ್ತು ಮೈದಾನ ಪ್ರದೇಶಕ್ಕೆ ಸೂಕ್ತವಾದ ತಳಿಗಳ ಬಗ್ಗೆ ಡಾ.ಆರ್.ಕೆ. ರಾಮಚಂದ್ರ ವಿವರಿಸಿದರು. ಸಮಗ್ರ ಬೇಸಾಯ ತಂತ್ರಜ್ಞಾನದ ಬಗ್ಗೆ ಬಿ.ಎನ್. ರಾಜೇಂದ್ರ, ಸಸ್ಯ ಸಂರಕ್ಷಣೆ ಕುರಿತು ಡಾ ಬಿ. ಆಂಜನೇಯರೆಡ್ಡಿ, ಕೊಯ್ಲೋತ್ತರ ತಂತ್ರಜ್ಞಾನ ಕುರಿತು ಎಂ. ರಮೇಶ್, ಸಂರಕ್ಷಣೆ ಮತ್ತು ಮಾರುಕಟ್ಟೆ ಕುರಿತು ಡಾ.ಬಿ. ಸುಬ್ರಮಣ್ಯಂ
ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಕೃಷ್ಣಪ್ಪ, ಉಪಾಧ್ಯಕ್ಷ ಕೆ. ಮಂಜುನಾಥ್ ಪ್ರಗತಿಪರ ರೈತರಾದ ನಾರಾಯಣಸ್ವಾಮಿ, ಅಶೋಕ್, ಬಾಬು, ಶ್ರೀನಾಥ್, ಬೈಯ್ಯಾರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.