ADVERTISEMENT

ಏ.18ಕ್ಕೆ ಆರೋಗ್ಯ ಮೇಳ- ಜನರಿಗೆ ಉಪಯುಕ್ತ: ಜಿಲ್ಲಾಧಿಕಾರಿ ವೆಂಕಟ್‌ರಾಜಾ

ಜನರಿಗೆ ಉಪಯುಕ್ತ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 14:46 IST
Last Updated 13 ಏಪ್ರಿಲ್ 2022, 14:46 IST
ಜಿಲ್ಲಾಧಿಕಾರಿ ವೆಂಕಟ್‌ರಾಜಾ ಆರೋಗ್ಯ ಮೇಳದ ಸಂಬಂಧ ಕೋಲಾರದಲ್ಲಿ ಬುಧವಾರ ಸಭೆ ನಡೆಸಿದರು
ಜಿಲ್ಲಾಧಿಕಾರಿ ವೆಂಕಟ್‌ರಾಜಾ ಆರೋಗ್ಯ ಮೇಳದ ಸಂಬಂಧ ಕೋಲಾರದಲ್ಲಿ ಬುಧವಾರ ಸಭೆ ನಡೆಸಿದರು   

ಕೋಲಾರ: ‘ಜಿಲ್ಲೆಯಲ್ಲಿ ಏ.18ರಿಂದ 22ರವರೆಗೆ ಆರೋಗ್ಯ ಮೇಳ ಏರ್ಪಡಿಸಿದ್ದು, ಮೇಳ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮನವಿ ಮಾಡಿದರು.

ಆಯುಷ್ಮಾನ್‌ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಬಲವರ್ಧನೆ ಹಾಗೂ ಆರೋಗ್ಯ ಮೇಳ ಕುರಿತು ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಅಗತ್ಯ ಔಷಧ ಮಾತ್ರೆಗಳೊಂದಿಗೆ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಬಯಸುವ ಬಡ ಜನರಿಗೆ ಆರೋಗ್ಯ ಮೇಳ ಉಪಯುಕ್ತವಾಗಿದೆ’ ಎಂದು ತಿಳಿಸಿದರು.

‘ಔಷಧದ ವಿವಿಧ ವ್ಯವಸ್ಥೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಆರೋಗ್ಯ ಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲು ಈ ಆರೋಗ್ಯ ಮೇಳ ಸಹಕಾರಿಯಾಗಿದೆ. ಬಡ ರೋಗಿಗಳು ಆರೋಗ್ಯ ಮೇಳದ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಆರೋಗ್ಯ ಮೇಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಮೂಲಕ ಜನರಿಗೆ ಆರೋಗ್ಯ ಮೇಳದ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಸೂಚಿಸಿದರು.

‘ಶಿಬಿರದಲ್ಲಿ ಆಯುಷ್‌ ಮೆಡಿಸನ್ ಕೌಂಟರ್ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಔಷಧ ವಿತರಣೆ ಮಾಡಲಾಗುವುದು. ಪ್ರಮುಖ ವೈದ್ಯಕೀಯ ಸೇವೆ ಹಾಗೂ ಮಾನಸಿಕ ಆರೋಗ್ಯ ಸೇವೆಗಳು, ಮೂಳೆ ಚಿಕಿತ್ಸೆ ಮತ್ತು ಪುನರಾವರ್ತಿಸುವ ಸೇವೆಗಳನ್ನು ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕ್ಷಯ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಔಷಧ ನೀಡಲಾಗುವುದು. ಜಾಗೃತಿ ಚಟುವಟಿಕೆ ಮತ್ತು ಸ್ಟ್ರೀಮಿಂಗ್ ಧ್ಯಾನ ಲಭ್ಯವಿರುತ್ತದೆ. ಭಾರತೀಯ ವೈದ್ಯಕೀಯ ಪದ್ಧತಿ, ಆಯುರ್ವೇದ, ಯೋಗ, ಯುನಾನಿ, ಹೋಮಿಯೋಪತಿ ಸೇವೆ ನೀಡಲಾಗುವುದು. ಆಯುಷ್ಮಾನ್‌ ಭಾರತ್ ಕಾರ್ಡ್ ವಿತರಣೆ, ಸಾಮಾನ್ಯ ಆರೋಗ್ಯ ತಪಾಸಣೆ ಪರಿಣಿತರೊಂದಿಗೆ ದೂರವಾಣಿ ಸಮಾಲೋಚನೆ ವ್ಯವಸ್ಥೆ ಸಹ ಕಲ್ಪಿಸಲಾಗುವುದು’ ಎಂದರು.

ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ‌ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌,ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ.ಚಾರಿಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಡಾ.ಚಂದನ್, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.