ಕೆಜಿಎಫ್: ತಾಲ್ಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಅನೇಕ ಸಣ್ಣಪುಟ್ಟ ಕೆರೆ ಮತ್ತು ಕುಂಟೆಗಳು ತುಂಬಿವೆ. ಎಲ್ಲೆಡೆ ಹಸಿರು ಎದ್ದು ಕಾಣುತ್ತಿದೆ.
ಸದಾ ಬರಗಾಲವನ್ನೇ ಹೊದ್ದು ಮಲಗಿದ ತಾಲ್ಲೂಕು ಎಂಬ ಹಣೆಪಟ್ಟ ಕಟ್ಟಿಕೊಂಡಿದ್ದ ತಾಲ್ಲೂಕಿನಲ್ಲಿ ಈ ಬಾರಿ ಬೀಳುತ್ತಿರುವ ಮಳೆ ಆಶಾದಾಯಕವಾಗಿದೆ. ಕಳೆದ ಬಾರಿ ಮತ್ತು ವಾಡಿಕೆಗಿಂತ ಮಳೆ ಈ ಬಾರಿ ಹೆಚ್ಚಾಗಿದೆ. ರಾಗಿ ಮತ್ತು ಕಡಲೆಕಾಯಿ ಬೆಳೆ ಉತ್ತಮವಾಗಿದೆ. ಜನರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ನಗರ ಮತ್ತು ಬೇತಮಂಗಲಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಬೇತಮಂಗಲ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಪೂರ್ಣವಾಗಿ ಒಣಗಿಹೋಗಿದ್ದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿದೆ. ನಲ್ಲೂರು ಕಡೆಯಿಂದ ಸಣ್ಣ ಏಟಿ ಮತ್ತು ದೊಡ್ಡ ಏಟಿಗಳ ಮೂಲಕ ನೀರು ಕೆರೆಗೆ ಹರಿದು ಬರುತ್ತಿದೆ. ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿದ್ದ ಜಾಲಿ ಮರಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ನೀರು ಸರಾಗವಾಗಿ ಹರಿಯಲು ಮತ್ತು ನಿಲ್ಲಲು ಅನುಕೂಲವಾಗಿದೆ.
ಬೇತಮಂಗಲ ಕೆರೆಗೆ ಪ್ರಮುಖವಾಗಿ ಹರಿದು ಬರುವ ಕಳ್ಳಿಕುಪ್ಪ ಕೆರೆ ತುಂಬಿದೆ. ಕೆಲವೇ ಅಡಿಗಳಷ್ಟು ನೀರು ಕೋಡಿಗೆ ಬಾಕಿ ಇದೆ. ಕಳ್ಳಿಕುಪ್ಪ ಕೆರೆ ತುಂಬಿ ಹರಿದರೆ ಬೇತಮಂಗಲಕ್ಕೆ ಮತ್ತಷ್ಟು ನೀರು ಹರಿದು ಬರುತ್ತದೆ. ಬೇತಮಂಗಲ ಜಲಾಶಯಕ್ಕೆ ಹರಿದುಬರುವ ನೀರಿನ ಸರಣಿ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದು ಆಶಾದಾಯಕವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.