ADVERTISEMENT

ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:31 IST
Last Updated 11 ಏಪ್ರಿಲ್ 2019, 17:31 IST

ಕೋಲಾರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಏ.13ರಂದು ನಗರಕ್ಕೆ ಆಗಮಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಮನವಿ ಮಾಡಿದ್ದಾರೆ.

ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಚಾರ ಸಭೆ ನಡೆಯಲಿದೆ. ಸಭೆಗೆ ಬರುವ ಪ್ರತಿ ವ್ಯಕ್ತಿಯನ್ನು ಭದ್ರತೆ ದೃಷ್ಟಿಯಿಂದ ತಪಾಸಣೆ ಮಾಡಿದ ನಂತರವಷ್ಟೇ ಕ್ರೀಡಾಂಗಣದೊಳಗೆ ಹೋಗಲು ಅವಕಾಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಕ್ರೀಡಾಂಗಣಕ್ಕೆ ಬರುವ ಸಾರ್ವಜನಿಕರು ಮೊಬೈಲ್‌, ಬೆಂಕಿ ಪೊಟ್ಟಣ, ಮಾದಕ ವಸ್ತುಗಳು, ಸಿಗರೇಟ್, ತಂಬಾಕು ಪದಾರ್ಥಗಳು, ನೀರಿನ ಬಾಟಲಿ, ಬಾವುಟ ಯಾವುದೇ ಶಸ್ತ್ರಾಸ್ತ್ರ ತರುವಂತಿಲ್ಲ. ಕ್ರೀಡಾಂಗಣಕ್ಕೆ 2 ಪ್ರವೇಶದ್ವಾರಗಳಿವೆ. ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಕ್ರೀಡಾ ವಿದ್ಯಾರ್ಥಿನಿಲಯದ ಪಕ್ಕ ಹೊಸದಾಗಿ ನಿರ್ಮಾಣವಾಗಿರುವ ರಸ್ತೆ ಮತ್ತು ಕ್ರೀಡಾಂಗಣ ಮುಂಭಾಗದ ಪ್ರವೇಶದ್ವಾರದ ಮೂಲಕ ಸಾರ್ವಜನಿಕರು ಒಳ ಬರಬಹುದು ಎಂದು ಹೇಳಿದ್ದಾರೆ.

ADVERTISEMENT

ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅಂತರಗಂಗೆ ರಸ್ತೆಯ ಕೀಲುಕೋಟೆಯಲ್ಲಿನ ಇ-ಜೋನ್ ಕ್ರಿಕೆಟ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.