ADVERTISEMENT

ಮಾಲೂರು ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ; ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:45 IST
Last Updated 20 ಜುಲೈ 2025, 7:45 IST
   

ಕೋಲಾರ: ‘ಮಾಲೂರು ತಾಲ್ಲೂಕಿನಲ್ಲಿ ವಿವಿಧೆಡೆ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದು, ಪರಿಸರ ಹಾಳಾಗುತ್ತಿದೆ. ಅಲ್ಲದೇ, ಸರ್ಕಾರಕ್ಕೆ ಬರಬೇಕಾಗಿದ್ದ ಹಣ ಕೈತಪ್ಪಿ ಹೋಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರರಾದ ಡಿ.ಮುನೇಶ್ ಹಾಗೂ ನವೀನ್ ಕುಮಾರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಬೆಂಬಲದಿಂದ ಈ ಕೃತ್ಯ ನಡೆಯುತ್ತಿದೆ. ಹೀಗಾಗಿ, ಜಿಲ್ಲಾಧಿಕಾರಿಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಟೇಕಲ್‌ ಹೋಬಳಿಯ ತಿಮ್ಮನಾಯಕನಹಳ್ಳಿ ಅಗ್ರಹಾರದಲ್ಲಿ ಕಾನೂನು ಬಾಹಿರವಾಗಿ ಬಂಡೆಯನ್ನು ಕಬಳಿಸಿ ಅಲ್ಪಸ್ವಲ್ಪ ರಾಜಧನ (ರಾಯಲ್ಟಿ) ಪಾವತಿಸಿ, ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಅಧಿಕಾರಿಗಳು ಮಾಲೀಕರ ಜೊತೆ ಭಾಗಿಯಾಗಿದ್ದು, ಇದರಲ್ಲಿ ₹ 50 ಕೋಟಿಗೂ ಹೆಚ್ಚು ಹಗರಣ ನಡೆದಿದೆ. ಇದೇ ರೀತಿ ತಾಲ್ಲೂಕು ವ್ಯಾಪ್ತಿಯಲ್ಲಿ 100 ಎಕರೆಗೂ ಹೆಚ್ಚು ಬಫರ್ ಜೋನ್‌ನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸುಮಾರು ₹ 3 ಸಾವಿರ ಕೋಟಿ ಹಗರಣ ನಡೆದಿದೆ’ ಎಂದು ದೂರಿದರು.

ADVERTISEMENT

‘ಈಗಾಗಲೇ ಉಪಲೋಕಾಯುಕ್ತ ಬಿ.ವೀರಪ್ಪ ಸ್ಥಳ ಪರಿಶೀಲನೆ ನಡೆಸಿ ಪರಿಸರ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲು ಕೂಡ ಸೂಚಿಸಿದ್ದಾರೆ. ಕ್ರಷರ್ ಘಟಕ ಬಂದ್ ಮಾಡಲು ನೋಟಿಸ್‌ ಜಾರಿ ಮಾಡಿದ್ದಾರೆ. ಕ್ರಷರ್ ಸ್ಥಗಿತಗೊಳಿಸಿ ಏರ್ ಚೆಕಿಂಗ್ ಮಾಡುತ್ತಿದ್ದು, ಸುಳ್ಳು ವರದಿ ಸಿದ್ಧಪಡಿಸಲು ಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಗಣಿಗಾರಿಕೆ ವೇಳೆ ಕಾರ್ಮಿಕರು ಮೃತಪಟ್ಟರೂ ಪೊಲೀಸ್ ಇಲಾಖೆ ತನಿಖೆ ನಡೆಸದೆ ಕಾರ್ಮಿಕರ ಮೇಲೆಯೇ ಕೇಸು ದಾಖಲಿಸುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.