ಮುಳಬಾಗಿಲು: ‘ಒಕ್ಕೂಟವು ತನ್ನ ಇತಿಮಿತಿಯಲ್ಲಿ ಹಾಲು ಖರೀದಿ ದರ ಹೆಚ್ಚಿಸಲು ಮುಂದಾಗಿದೆ. ಆದರೆ, ರಾಜ್ಯ ಸರ್ಕಾರ ಮಾರಾಟ ದರವನ್ನು ಹೆಚ್ಚಿಸಿ ಹಾಲು ಉತ್ಪಾದಕರ ನೆರವಿಗೆ ಬಾರದಿರುವುದು ರೈತ ವಿರೋಧಿ ನೀತಿಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ದೂರಿದರು.
ನಗರದ ಕೋಚಿಮುಲ್ ಕ್ಯಾಂಪ್ ಕಚೇರಿಯಲ್ಲಿ ಗುರುವಾರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ಮತ್ತು ರೋಟರಿ ಕಾಮಧೇನು ಯೋಜನೆಯಡಿ ತಾಲ್ಲೂಕಿನ ಕರಡಿಗಾನಹಳ್ಳಿ ಮತ್ತು ಭೀಮಾಪುರ ಗ್ರಾಮದ 10 ಮಹಿಳಾ ಹಾಲು ಉತ್ಪಾದಕರಿಗೆ ಹಸು ಖರೀದಿಸಲು ತಲಾ ₹ 50 ಸಾವಿರದಂತೆ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡಿದರು.
ರೋಟರಿ ಕಾಮಧೇನು ನೂತನ ಯೋಜನೆಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಚೈತನ್ಯವಂತರನ್ನಾಗಿ ಮಾಡುವುದಾಗಿದೆ. ಇದನ್ನು ಸದುಪಯೋಗ ಪಡಿಸಿಸಿಕೊಂಡು ಸಾಲ ಮರು ಪಾವತಿಸಿದರೆ ಮತ್ತೆ ಗ್ರಾಮದ ಹತ್ತು ಮಂದಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೋಚಿಮುಲ್ ಉಪ ವ್ಯವಸ್ಥಾಪಕಿ ಆರ್. ವಿಜಯಲಕ್ಷ್ಮಿ ಮಾತನಾಡಿ, ‘ಉತ್ಪಾದಕರು ಗುಣಮಟ್ಟದ ಹಾಲು ನೀಡಲು ಮುಂದಾಗಬೇಕು’ ಎಂದು ತಿಳಿಸಿದರು.
ಕೋಚಿಮುಲ್ ಕ್ಯಾಂಪ್ ಕಚೇರಿ ವ್ಯವಸ್ಥಾಪಕ ಡಾ.ಕಿರಣ್, ಚಿನ್ನಹಳ್ಳಿ ಗೋಪಾಲ್, ರವಿಕುಮಾರ್, ನಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.