ಕೆಜಿಎಫ್: ಬಿಜಿಎಂಎಲ್ ನೌಕರರ ವಾಸಕ್ಕಾಗಿ ಮೂಲ ಸೌಕರ್ಯ ಇರುವ ಬಡಾವಣೆ ರಚಿಸಲು 250 ಎಕರೆ ಜಮೀನನ್ನು ಮೀಸಲು ಇಡುವಂತೆ ಸರ್ಕಾರವನ್ನು ಕೋರಲಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ರಾಬರ್ಟ್ಸನ್ಪೇಟೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಈಗ ಇರುವ ಮನೆಗಳು ಅವರ ವಾಸಕ್ಕೆ ಯೋಗ್ಯವಲ್ಲ ಎಂಬ ರೀತಿಯಲ್ಲಿ ಇದೆ. ಆದ್ದರಿಂದ ಎಸ್ಟಿಬಿಪಿ ಯೋಜನೆಯಲ್ಲಿ ನಿವೃತ್ತಿ ಪಡೆದವರು ಸೇರಿದಂತೆ ಬಿಜಿಎಂಎಲ್ ಕಾರ್ಮಿಕರ ಕುಟುಂಬಗಳಿಗೆ ಉತ್ತಮ ಬಡಾವಣೆ ನಿರ್ಮಿಸಿ ಅದರಲ್ಲಿ ನಿವೇಶನ ಹಂಚಿಕೆ ಮಾಡಲು ಬಿಜಿಎಂಎಲ್ ಪ್ರದೇಶದಲ್ಲಿ ಸಿಗುವ 250 ಎಕರೆ ಜಮೀನನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಬೆಮಲ್ನಿಂದ ವಾಪಸ್ ಪಡೆದ ಜಾಗದಲ್ಲಿ ಕೈಗಾರಿಕೆ ಟೌನ್ಶಿಪ್ಗೆ ಈಗಾಗಲೇ ಸರ್ಕಾರ ಸ್ಪಂದನೆ ನೀಡಿದೆ. ಹಲವಾರು ಸ್ಟಾರ್ಟ್ ಅಪ್ಗಳು ನಗರಕ್ಕೆ ಬರಲಿದೆ ಎಂದರು.
ಧ್ವಜಾರೋಹಣ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿ ತ್ಯಾಗ ಕೊಡುಗೆಗಳನ್ನು ನಾವು ಈಗ ಅನುಭವಿಸುತ್ತಿದ್ದೇನೆ. ಅವರನ್ನು ಸದಾ ನೆನೆಯಬೇಕು. ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ದೇಶ ಮತ್ತಷ್ಟು ಅಭಿವೃದ್ಧಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಮಂಜುನಾಥ್, ಪೌರಾಯುಕ್ತ ಪವನ್ಕುಮಾರ್, ಡಿವೈಎಸ್ಪಿ ವಿ.ಎಲ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಎನ್. ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಚಾರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶಾಲಾ ಮಕ್ಕಳಿಂದ ಮತ್ತು ಅಗ್ನಿಪಥ ವೀರರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.