ADVERTISEMENT

ಗೋಮಾಳ ಒತ್ತುವರಿ: ಸಿಬಿಐ ತನಿಖೆಗೆ ಒತ್ತಾಯ

ಮುಳಬಾಗಿಲು ತಾಲ್ಲೂಕು ಕಚೇರಿ ಎದುರು ರೈತಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:01 IST
Last Updated 24 ನವೆಂಬರ್ 2020, 3:01 IST
ಗೋಮಾಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘದಿಂದ ತಾಲ್ಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು
ಗೋಮಾಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘದಿಂದ ತಾಲ್ಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು   

ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಯಪ್ಪನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಗೋಮಾಳ ಜಾಗದ ಒತ್ತುವರಿಯಾಗಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರೈತಸಂಘ ಸದಸ್ಯರು ಒತ್ತಾಯಿಸಿದರು.

‘ರಾಕ್‌ವ್ಯಾಲಿ ರೆಸಾರ್ಟ್‌ ನಿರ್ಮಿಸಿರುವ ಜಮೀನಿನಲ್ಲಿ ಗೋಮಾಳ ಒತ್ತುವರಿಯಾದೆ. ಜೊತೆಗೆ ಭೂಪರಿವರ್ತನೆಯಾಗದೆ ಅಕ್ರಮವಾಗಿ ರೆಸಾರ್ಟ್‌ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಂಡು ಸರ್ವೆ ಮಾಡಿಸಿ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳಬೇಕು’ ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ‘ತಾಲ್ಲೂಕಿನ ಭೂ ಕಬಳಿಕೆದಾರರಿಗೆ ಭಯವಿಲ್ಲವಾಗಿದೆ. ಗೋಮಾಳ, ಗುಂಡುತೋಪು, ಕೆರೆಯಂಗಳಗಳನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಹೋಟೆಟ್‌ಗಳು, ಲೇಔಟ್‌ಗಳನ್ನು ಮಾಡುತ್ತಿದ್ದರೂ ಸಂಬಂಧಪಟ್ಟ ಕಂದಾಯ ಸರ್ವೆ ನೋಂದದಣಿ ಇಲಾಖೆ ಅಧಿಕಾರಿಗಳು ಕಣ್ಮಚ್ಚಿ ಕುಳಿತಿದ್ದಾರೆ. ಇವರೆಲ್ಲೂ ಶಾಮೀಲಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌‌

ADVERTISEMENT

‘ಉದಾಹರಣೆಗೆ, ಮುಳಬಾಗಿಲು ತಾಲೂಕು ಬೈರಕೂರು ಹೋಬಳಿ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಕ್‌ವ್ಯಾಲಿ ರೆಸಾರ್ಟ್‌ನವರು ಭೂಪರಿವರ್ತನೆ ಮಾಡಿಸಿಕೊಂಡಿಲ್ಲ. ಜೊತೆಗೆ ಗೋಮಾಳ ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಹೋಟೆಲ್, ಬಾರ್ ನಡೆಸುತ್ತಿದ್ದರೂ ಅಧಿಕಾರಿಗಳು ಕಣ್ಣಿಗೆ ಕಾಣಿಸದೆ ರೀತಿ ವರ್ತನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಐದು ಹೋಬಳಿಗಳ ಭೂಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುತ್ತದೆ. ಕಸಬಾ ಹೋಬಳಿ ಶ್ರೀರಂಗಪುರ ಸರ್ವೆ ನಂಬರ್ 10ರಲ್ಲಿ 8ಎಕರೆ 19ಗುಂಟೆ, ಸರ್ವೆ ನಂಬರ್ 4ರಲ್ಲಿ 16ಎಕರೆ 26ಗುಂಟೆ ಸರ್ಕಾರಿ ಜಮೀನಿದ್ದು, ಇದನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಸಿದ್ದಾರೆ’ ಎಂದರು.

‘ಆವಣಿ ಹೋಬಳಿ ದೇವರಾಯಸಮುದ್ರಂ ಕಂದಾಯ ವೃತ್ತದಲ್ಲಿ ಸರ್ಕಾರಿ ಕೈಗಾರಿಕೆ ಸ್ಥಾಪನೆ ಮಾಡಲು ಅನುಮತಿ ನೀಡಿರುವ 1,559 ಎಕರೆ ಜಮೀನಿನಲ್ಲಿ ಸರಿಸುಮಾರು 600 ಎಕರೆ ಬಡವರ ಹೆಸರಿನಲ್ಲಿ ಬೆಂಗಳೂರು ಮೂಲಕ ಉದ್ಯಮಿಗಳು ನಕಲಿ ದಾಖಲೆಗಳ ಮೂಲಕ ಭೂದಾಖಲೆಗಳನ್ನು ಮಾಡಿಕೊಂಡಿದ್ದಾರೆ. ದುಗ್ಗಸಂದ್ರ ಹೋಬಳಿಯಲ್ಲಿ ಸಮಾಜ ಸೇವಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು 180 ಎಕರೆ ಗೋಮಾಳ ಜಮೀನು ಅಕ್ರಮವಾಗಿ ಬೇಲಿ ಆಳವಡಿಸಿದ್ದಾರೆ’ ಎಂದರು.

ತಾಲೂಕು ಘಟಕದ ಅಧ್ಯಕ್ಷ ಫಾರೂಖ್ ಪಾಷ ಮಾತನಾಡಿ, ‘ಬಡವರು ಒಂದು ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡರೆ ದೊಡ್ಡ ಸಾಧನೆಯಂತೆ ಅವರ ಮೇಲೆ ಕೇಸು ದಾಖಲಿಸಿ ಒತ್ತುವರಿ ಬಿಡಿಸುತ್ತೇವೆಂದು ಅಧಿಕಾರಿಗಳು ಹೇಳುತ್ತಾರೆ. ಅವರ ಪೌರುಷ ಇಂತಹ ಬಲಾಢ್ಯರ ಮೇಲೆ ತೋರಿಸಿ ಸರ್ಕಾರಿ ಜಮೀನು ಒತ್ತುವರಿಯನ್ನು ಬಿಡಿಸಿಕೊಳ್ಳಲಿ. ಕೂಡಲೇ ರಾಕ್‌ವ್ಯಾಲಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ತರಿಸಿಕೊಂಡು ಸರ್ವೆ ಮಾಡಿಸಿ ಒತ್ತುವರಿಯನ್ನು ಬಿಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಜಯರಾಮ್, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಜಯ್ಪಾಲ್, ದೇವರಾಜ್, ಅಣ್ಣಿಹಳ್ಳಿ ನಾಗರಾಜ್, ವೇಣು, ನವೀನ್, ವೆಂಕಟರಾಮರೆಡ್ಡಿ, ಸುಪ್ರೀಂಚಲ, ಸಾಗರ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೋಲಾರ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್ಪಾಷ, ಜಮೀರ್ ಪಾಷ, ಜಾವೀದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.