ಮುಳಬಾಗಿಲು: ನಗರಸಭೆಗೆ ₹5 ಕೋಟಿ ಅನುದಾನ ಮಂಜೂರಾಗಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಸಭೆ ಸೇರಿ ಯಾವ ವಾರ್ಡ್ಗಳಲ್ಲಿ ಅಭಿವೃದ್ಧಿಯಾಗಬೇಕು ಎಂಬುದರ ಪಟ್ಟಿ ತಯಾರಿಸಬೇಕು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಸೂಚಿಸಿದರು.
ನಗರಸಭಾ ಕಚೇರಿಗೆ ಶುಕ್ರವಾರ ಭೇಟಿ ನೀಡಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಮಾತನಾಡಿ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳು, ಉತ್ತಮ ರಸ್ತೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಗರಸಭೆಗೆ ಅಗತ್ಯವಿರುವ ಸಿಬ್ಬಂದಿಗಳ ಕುರಿತು ವಿವರ ನೀಡಲು ತಿಳಿಸಿದರು. ಸೋಮೇಶ್ವರಪಾಳ್ಯದ ಕೆರೆ ಬಳಿಯ ಪಾರ್ಕ್ ಅಭಿವೃದ್ಧಿಗೊಳಿಸಲು ₹4ಕೋಟಿ ಮಂಜೂರಾಗಿದೆ. ಪಾರ್ಕ್ಗೆ ವರನಟ ಡಾ.ರಾಜ್ಕುಮಾರ್ ಹೆಸರಿಡಲಾಗುವುದು. ರಾಜ್ಕುಮಾರ್ ಪುತ್ಥಳಿ ಸ್ಥಾಪಿಸಲಾಗುವುದು ಎಂದರು.
ನಗರದ 31 ವಾರ್ಡ್ಗಳಲ್ಲಿ ಪ್ರತಿ ವಾರ್ಡ್ನಲ್ಲೂ ಇಬ್ಬರು ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ಮಾಜಿ ಸಚಿವ ಆಲಂಗೂರು ಶ್ರೀನಿವಾಸ ಅವರ ಪುತ್ಥಳಿಯನ್ನು ನಗರಸಭೆಆವರಣದಲ್ಲಿ ಡಿಸೆಂಬರ್ 9ರಂದು ಅನಾವರಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ರಿಯಾಜ್, ಸದಸ್ಯ ಎಂ.ಪ್ರಸಾದ್, ನಾಗರಾಜ್, ಎಸ್.ವೈ.ರಾಜಶೇಖರ್, ಡಿ.ಸೋಮಪ್ಪ, ರಾಜಣ್ಣ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.