
ಕೋಲಾರ: ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಪುತ್ಥಳಿ ನಿರ್ಮಾಣದ ಬಗ್ಗೆ ವೇಮನ ಜಯಂತಿ ಆಚರಣೆ ವೇಳೆ ಮಾತ್ರ ಪ್ರಸ್ತಾಪಿಸುತ್ತೀರಿ. ಆ ಬಳಿಕ ಸುಮ್ಮನಾಗುತ್ತೀರಿ. ಕೆ.ಸಿ.ರೆಡ್ಡಿ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಪುತ್ಥಳಿ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಭರವಸೆ ನೀಡಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ಡಿ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದಿದ್ದು ಕೈಗಾರಿಕೆಗಳನ್ನು ಪ್ರಾರಂಭ ಮಾಡಿ ಬೇರೆಯವರಿಗೆ ಉದ್ಯೋಗ ಕೊಡಿ. ಕೈಗಾರಿಕಾ ಪ್ರದೇಶದಲ್ಲಿ ಜಮೀನು ಪಡೆದು ಪ್ರಾರಂಭ ಮಾಡಿ. ಬೇರೆಯವರಿಗೆ ಅವಕಾಶ ಬೇಡ. ತಾವೇ ಕೈಗಾರಿಕೆ ಪ್ರಾರಂಭ ಮಾಡಿ. ತಮ್ಮ ಬಳಿ ಹಣ, ಶಿಕ್ಷಣ ಎಲ್ಲವೂ ಇದೆ ಎಂದರು.
ಮುಳಬಾಗಿಲು ಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾತನಾಡಿ, ಮೇ 10 ರಂದು ಮುಳಬಾಗಿಲಿನಲ್ಲಿ ರೆಡ್ಡಿ ಭವನ ಕಟ್ಟಲು ಎರಡು ಎಕರೆ ಜಾಗ ಮಂಜೂರು ಮಾಡಿ ಅಂದೇ ಭೂಮಿಪೂಜೆ ಮಾಡಲಾಗುವುದು ಎಂದರು.
ರೆಡ್ಡಿ ಸಮುದಾಯದ ಜಿಲ್ಲಾಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ರೆಡ್ಡಿ ಜನಾಂಗ ಒಳಿತಿಗಾಗಿ ಕೆ.ಸಿ ರೆಡ್ಡಿ ಪುತ್ಥಳಿ ಅನಾವರಣ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ಸಮುದಾಯ ಭವನ ಮತ್ತು ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಜಾಗ ಕೊಡಿಸಬೇಕು. ಸಮುದಾಯದ ವಿಚಾರ ಬಂದಾಗ ಒಗ್ಗಟ್ಟಿನಿಂದ ಇರಬೇಕು’ ಎಂದು ಹೇಳಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ‘ರೆಡ್ಡಿ ಜನಾಂಗದ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಜಿಲ್ಲಾ ಕೇಂದ್ರದಲ್ಲಿ ಒಂದು ಎಕರೆ ಜಾಗವನ್ನು ಮಂಜೂರು ಮಾಡಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಅವರ ಪುತ್ಥಳಿ ನಿರ್ಮಾಣಕ್ಕೆ ಪಕ್ಷಾತೀತವಾಗಿ ಸಹಕರಿಸುತ್ತೇನೆ’ ಎಂದರು.
ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ನಮ್ಮ ಆಲೋಚನೆಗಳಿಗೆ ಅನುಗುಣವಾಗಿ ಅಧಿಕಾರ ಸಿಕ್ಕಾಗ ಸಮಾಜದ ಮತ್ತು ಸಮುದಾಯಗಳ ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸುವಂತಾಗಬೇಕು. ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೋಗಬೇಕು. ಸಮಾಜದ ಮತ್ತು ಸಮುದಾಯದ ಸಮಸ್ಯೆಗಳು ಬಂದಾಗ ತಮ್ಮ ಜೊತೆಗೆ ಇರುತ್ತೇವೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಮೈತ್ರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಸಮಾಜಸೇವಕ ಕಿರಣ್ ಕುಮಾರ್ ರೆಡ್ಡಿ, ಸಂಘದ ಗೌರವ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡರಾದ ಪ್ರಭಾಕರ್ ರೆಡ್ಡಿ, ಶಾಂತರಾಜು, ರವೀಂದ್ರರೆಡ್ಡಿ, ವೆಂಕಟಕೃಷ್ಣರೆಡ್ಡಿ, ರಾಘವೇಂದ್ರ ರೆಡ್ಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ ಹಾಗೂ ರೆಡ್ಡಿ ಸಮುದಾಯದ ಮುಖಂಡರು ಇದ್ದರು.
ರಾಜಕೀಯ ಹೊಲಸೆದ್ದು ಹೋಗಿದೆ
ಎಲ್ಲಾ ಕ್ಷೇತ್ರಗಳು ಸರಿ ಇವೆ. ಆದರೆ ರಾಜಕೀಯ ಕ್ಷೇತ್ರ ಮಾತ್ರ ಹೊಲಸೆದ್ದು ಹೋಗಿದೆ. ಯಾರು ಈ ಕ್ಷೇತ್ರಕ್ಕೆ ಬರಬೇಡಿ. ಬಂದರೆ ಮುಂದೆ ಕಷ್ಟ ಗ್ಯಾರಂಟಿ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು. ನಾನು ಜಿಲ್ಲಾ ಕೇಂದ್ರದ ಯಾವುದೇ ಕಾರ್ಯಕ್ರಮಕ್ಕೆ ಬರಲ್ಲ. ಜಿಲ್ಲಾಡಳಿತವು ಕೆಲವರಿಗೆ ಮಾತ್ರ ಸೀಮೀತಗೊಳಿಸಿದೆ. ರೆಡ್ಡಿ ಜನಾಂಗ ನನ್ನ ಮೇಲೆ ಇಟ್ಟಿರುವ ವಿಶ್ವಾಸದಿಂದ ಇಷ್ಟಪಟ್ಟು ಬಂದಿದ್ದೇನೆ ಎಂದರು. ನನಗೆ ಏಕೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ? ಸಮುದಾಯ ಈ ಕಾರ್ಯಕ್ರಮ ಮಾಡಬೇಕಾ ಇಲಾಖೆಯಿಂದ ಮಾಡಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಯೋಗಿ ವೇಮನ ಭವ್ಯ ಮೆರವಣಿಗೆ
ವೇಮನ ಜಯಂತಿಯ ಭವ್ಯ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ಡೂಂ ಲೈಟ್ ಸರ್ಕಲ್ ನಗರ ಪೊಲೀಸ್ ಠಾಣೆ ಎಂ.ಜಿ ರಸ್ತೆ ಪಾರ್ಕ್ ಸರ್ಕಲ್ ಹಾದು ಟಿ.ಚನ್ನಯ್ಯ ರಂಮಂದಿರವರೆಗೆ ಸಾಗಿ ಬಂತು. ಪ್ರಬೋಧ ಸೇವಾ ಸಮಿತಿ ಮತ್ತು ಕೋಲಾರ ರೆಡ್ಡಿ ಸಂಘದ ಆಶ್ರಯದಲ್ಲಿ ಮೆರವಣಿಗೆ ನಡೆಯಿತು. ವೇಮನ ಪ್ರತಿಮೆಯನ್ನ ಭಕ್ತರು ತಮ್ಮ ಭುಜದ ಮೇಲೆ ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕಲಾ ತಂಡಗಳು ಮೆರುಗು ತುಂಬಿದವು. ವೇಮನ ಸಾಹಿತ್ಯದ ಪುಸ್ತಕವನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.