ಮಾಲೂರು: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಾಗೂ ಬಲಿಜ ಸಂಘದ ವತಿಯಿಂದ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತಿ ನಡೆಯಿತು.
ಈ ವೇಳೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಾಡಿನಾದ್ಯಂತ ಸಂಚರಿಸಿ ಬಡವರಿಗೆ ಸಹಾಯ ಮಾಡಿರುವ ಕೈವಾರ ತಾತಯ್ಯ ಅವರ ಕಾಲಜ್ಞಾನ ನಿಜವಾಗಿದೆ ಎಂದು ತಿಳಿಸಿದರು.
ಕೈವಾರ ತಾತಯ್ಯ ಅವರು ತನ್ನ ಕೀರ್ತನೆ ಹಾಗೂ ತತ್ವಪದಗಳ ಮೂಲಕ ಮನೆ ಮಾತಾಗಿದ್ದರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪಸರಿಸಿದ್ದರು ಎಂದರು.
ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಡಿ.ಎನ್.ನಾರಾಯಣಸ್ವಾಮಿ ಅವರು ಯೋಗಿ ನಾರೇಯಣ ಕೈವಾರ ತಾತಯ್ಯ ಅವರ ಹೆಸರಿನಲ್ಲಿ ಧ್ಯಾನ ಮಂದಿರ ನಿರ್ಮಾಣಕ್ಕೆ ನಿವೇಶನ ಹಾಗೂ ನಗರದ ಮುಖ್ಯ ವೃತ್ತದಲ್ಲಿ ತಾತಯ್ಯ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಧ್ಯಾನ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ತಹಶೀಲ್ದಾರ್ ಅವರು ಅದನ್ನು ಸಂಘಕ್ಕೆ ನೀಡುತ್ತಾರೆ. ಇನ್ನು ಪ್ರತಿಮೆ ಅನಾವರಣಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಮಾಜಿ ಶಾಸಕ ಎ.ನಾಗರಾಜು ಮಾತನಾಡಿ, ಕೈವಾರ ತಾತಯ್ಯ ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಕ ಘಟನೆಗಳು ಸತ್ಯವಾಗಿವೆ. ಭವಿಷ್ಯದ ಅರಿವಿದ್ದ ತಾತಯ್ಯ ಅವರು ತಮ್ಮ ಅಪಾರ ಜ್ಞಾನವನ್ನು ಅಧ್ಯಾತ್ಮಿಕ ಏಳಿಗೆಗೆ ಬಳಸಿದರು. ಜನರಲ್ಲಿದ್ದ ಮೌಢ್ಯ ತೊಲಗಿಸಲು ತಾತಯ್ಯ ಅವರು ಶ್ರಮಿಸಿದರು ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ವಿ.ರೂಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪದ್ಮಾವತಿ, ನಾರಾಯಣಸ್ವಾಮಿ, ಬಾಳಿಗಾನಹಳ್ಳಿ ಶ್ರೀನಿವಾಸ್, ಮುರಳಿಧರ್, ರಾಮಮೂರ್ತಿ, ಆನಂದಕುಮಾರ್, ಜಯಮಂಗಲ ಸೀನಪ್ಪ, ಪ್ರದೀಪ್ ಸುನೀಲ್, ರಾಜು, ಆಂಜಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.