ಬೇತಮಂಗಲ: ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುವರ್ಣಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ರಾತ್ರಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀದೇವಿ ಭೂದೇವಿ ಸಮೇತ ರಂಗನಾಥ ಸ್ವಾಮಿ ಕಲ್ಯಾಣೋತ್ಸವ ಹಾಗೂ ಗಂಗಮಾಂಭ ದೇವಿ ಮತ್ತು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಹಾಗೂ ಕರಗ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಭಾನುವಾರದಿಂದ ಪ್ರಾರಂಭವಾದ ಜಾತ್ರಾ ಮಹೋತ್ಸವವು ಹಸಿಕರಗ, ಹೂವಿನ ಕರಗ, ಅಗ್ನಿಕುಂಡ ಪ್ರವೇಶ ಹಾಗೂ ದೀಪೋತ್ಸವದ ಮೂಲಕ ಬುಧವಾರ ಮುಕ್ತಾಯಗೊಳ್ಳಲಿದೆ.
ಸೋಮವಾರ ರಾತ್ರಿ ಕರಕ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ ಗೋವಿಂದ ನಾಮಸ್ಮರಣೆಯಲ್ಲಿ ಕರಗವನ್ನು ಹೊತ್ತು ದೇವಾಲಯದಿಂದ ಹೊರ ಬಂದು, ವೇದಿಕೆ ಮೇಲೆ ತಮಟೆಯ ಶಬ್ದಕ್ಕೆ ವಿವಿಧ ಬಗೆಯಲ್ಲಿ ನೃತ್ಯ ಪ್ರದರ್ಶಿಸಿದರು.
ಗ್ರಾಮದ ಮನೆ ಮನೆಗೂ ತೆರಳಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ ಮಂಗಳವಾರ ಬೆಳಗ್ಗೆ ಅಗ್ನಿ ಗುಂಡ ಪ್ರವೇಶ ಮಾಡುವ ಮೂಲಕ ಕರಗ ದೇವಾಲಯ ಪ್ರವೇಶ ಮಾಡಿತು. ಕರಗ ಮಹೋತ್ಸವ ಅಂಗವಾಗಿ ಗ್ರಾಮ ದೇವತೆಗಳನ್ನು ಪುಷ್ಪ ಪಲ್ಲಕ್ಕಿ ಹಾಗೂ ಬೆಳ್ಳಿ ಪಲ್ಲಕ್ಕಿಯ ಮೂಲಕ ಮೆರವಣಿಗೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣಪ್ಪ, ಸುವರ್ಣಹಳ್ಳಿ, ಕುಪ್ಪಂ ಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.