ಬಂಧನ
(ಪ್ರಾತಿನಿಧಿಕ ಚಿತ್ರ)
ಕೆಜಿಎಫ್: ಅಕ್ರಮವಾಗಿ ಸಿಲಿಂಡರ್ ಭರ್ತಿ ಮಾಡುತ್ತಿದ್ದ ಜಾಲವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಶನಿವಾರ ಬಯಲಿಗೆಳೆದಿದ್ದು, ಕೃತ್ಯದಲ್ಲಿ ತೊಡಗಿದ್ದ ಆರು ಜನರನ್ನು ಊರಿಗಾಂ ಪೊಲೀಸರು ಬಂಧಿಸಿದ್ದಾರೆ.
ಊರಿಗಾಂನ ಸ್ಮಿತ್ ರಸ್ತೆಯಲ್ಲಿರುವ ಬಿಜಿಎಂಎಲ್ಗೆ ಸೇರಿದ ಹಳೇ ಡಿಎಂಎಸ್ ಕಚೇರಿಯಲ್ಲಿ ವಾಣಿಜ್ಯ ಮತ್ತು ನಾಗರಿಕ ಪೂರೈಕೆ ಮಾಡಲಾಗುವ ಸಿಲಿಂಡರ್ ಗಳನ್ನು ಬಳಸಿಕೊಂಡು, ಇತರ ಸಿಲಿಂಡರ್ ಗಳಿಗೆ ಗ್ಯಾಸ್ ಭರ್ತಿ ಮಾಡಲಾಗುತ್ತಿತ್ತು. ಈ ಸಂಬಂಧವಾಗಿ ಕೋಲಾರದ ಮೂಲದವರೊಬ್ಬರು ಇಲಾಖೆಗೆ ಖಚಿತ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ, 218 ಸಿಲಿಂಡರ್ ಗಳು ಸಿಕ್ಕಿವೆ. ಮೂರು ಗ್ಯಾಸ್ ರಿಫಿಲಿಂಗ್ ಯಂತ್ರ ಪತ್ತೆಯಾಗಿದೆ. ಗ್ಯಾಸ್ ಸಿಲಿಂಡರ್ ಸಾಗಾಣಿಕೆ ಮಾಡಲು ಉಪಯೋಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಸಿಲಿಂಡರ್ ಮೌಲ್ಯ ಸುಮಾರು $2. 13 ಲಕ್ಷ ಮತ್ತು ಇತರ ಸಾಮಾಗ್ರಿಗಳ ಮೊತ್ತ ಸುಮಾರು ₹7.50 ಲಕ್ಷ ಎಂದು ಅಂದಾಜಿಸಲಾಗಿದೆ.
ಇಲಾಖೆಯ ಅಧಿಕಾರಿ ರಘು ನೀಡಿದ ದೂರಿನನ್ವಯ ನಾಗಲ್ಯಾಂಡ್ ಮೂಲದ ಕೊರ್ನಾಲಿಸ್, ಅಸ್ಸಾಂನ ಇಷಾಕ್, ಜಾರ್ಖಂಡ್ನ ಸುಧಿರ್, ಪಶ್ಚಿಮ ಬಂಗಾಳದ ಅಜೀಂ ಮತ್ತು ಶೇಖ್ ಇನಾವರ್ ಮತ್ತು ರಾಜಸ್ತಾನದ ಕಬೀರ್ ಪುಲ್ವಾಲಿ ಎಂಬುರನ್ನು ಊರಿಗಾಂ ಪೊಲೀಸರು ಬಂಧಿಸಿದ್ದಾರೆ.
ಬಿಜಿಎಂಎಲ್ಗೆ ಸೇರಿದ ಕಟ್ಟಡದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೂ, ಬಿಜಿಎಂಎಲ್ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.