ಕೆಜಿಎಫ್: ದುರ್ವಾಸನೆ ಬಂದಿದ್ದ ಕೇಕ್ ಅನ್ನು ಗ್ರಾಹಕರಿಗೆ ವಿತರಣೆ ಮಾಡಿದ ಆರೋಪದ ಮೇಲೆ ರಾಬರ್ಟಸನ್ಪೇಟೆ ಗೀತಾ ರಸ್ತೆಯ ಬೇಕರಿಗೆ ನಗರಸಭೆ ಅಧಿಕಾರಿಗಳು ಶುಕ್ರವಾರ ಬೀಗ ಮುದ್ರೆ ಹಾಕಿದರು.
ಅಜಿತ್ ಎಂಬುವರು 4ನೇ ತಾರೀಕಿನಂದು ಕೇಕ್ ಖರೀದಿ ಮಾಡಿದ್ದರು. ಮನೆಗೆ ಹೋಗಿ ನೋಡಿದಾಗ ಕೇಕ್ನಿಂದ ವಾಸನೆ ಬರುತ್ತಿತ್ತು. ಅದನ್ನು ವಾಪಸ್ ಪಡೆದು ಬೇರೆ ಕೇಕ್ ಕೊಡುವಂತೆ ಕೇಳಿದರು. ಆಗ ಬೇಕರಿ ಸಿಬ್ಬಂದಿ ಸ್ಪಂದಿಸದೆ ಇರುವುದರಿಂದ ಅಜಿತ್ ಪೊಲೀಸ್ ಠಾಣೆಗೆ ಮತ್ತು ನಗರಸಭೆಗೆ ಹೋಗಿ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಪವನ್ಕುಮಾರ್ ಮತ್ತು ಕೋಲಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಪ್ರತ್ಯುಷ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೇಕರಿಯಲ್ಲಿ ಸ್ವಚ್ಚತೆ ಕಾಪಾಡದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದು ಬೇಕರಿಗೆ ಬೀಗ ಜಡಿಯಲಾಯಿತು.
ಬೇಕರಿ ಮತ್ತು ಸಿಹಿ ತಿನಿಸು ಅಂಗಡಿಗಳಲ್ಲಿ ಕೃತಕ ಬಣ್ಣವನ್ನು ಹಾಕಬಾರದು ಎಂದು ಎಚ್ಚರಿಕೆ ನೀಡಿದ್ದರೂ, ಕೆಲ ಅಂಗಡಿಗಳವರು ಕೃತಕ ಬಣ್ಣ ಬಳಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಾರಿ ನಗರಸಭೆ ನಡೆಸುವ ದಾಳಿಯಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಪವನ್ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.