ADVERTISEMENT

ಮಾರುಕಟ್ಟೆ ತೆರವು ಕಾರ್ಯ: ಕಾನೂನು ಬಾಹಿರ

ಸೇವ್‌ ಕೆಜಿಎಫ್‌ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:00 IST
Last Updated 15 ನವೆಂಬರ್ 2025, 7:00 IST
ಕೆಜಿಎಫ್‌ ಸೇವ್‌ ಸಮಿತಿ ಸದಸ್ಯರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಯಾನಂದ, ಜ್ಯೋತಿಬಸು, ಅನ್ಬಳಗನ್‌ ಇದ್ದರು
ಕೆಜಿಎಫ್‌ ಸೇವ್‌ ಸಮಿತಿ ಸದಸ್ಯರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಯಾನಂದ, ಜ್ಯೋತಿಬಸು, ಅನ್ಬಳಗನ್‌ ಇದ್ದರು   

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಹುಲ್ಲು ಮಾರುಕಟ್ಟೆಯ ಅಂಗಡಿಗಳನ್ನು ಏಕಾಏಕಿ ತೆರವು ಮಾಡಿರುವುದು ಕಾನೂನು ಬಾಹಿರ. ಸೇವ್‌ ಕೆಜಿಎಫ್‌ ಸಮಿತಿ ಬಡ ವರ್ತಕರ ಪರವಾಗಿ ಹೋರಾಟ ನಡೆಸಲಾಗುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ದಯಾನಂದ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಅವಧಿ ಮುಗಿಯುವ ಮುನ್ನ ನಡೆದ ಕೊನೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿಲ್ಲ. ನಿರ್ಣಯ ಅಂಗೀಕಾರ ಮಾಡಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವಳ್ಳಲ್‌ ಮುನಿಸ್ವಾಮಿ ಅಧಿಕಾರಿಗಳನ್ನು ಬಿಟ್ಟು ತಾವೇ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಇದು ಕಾನೂನು ಬಾಹಿರ. ಅಂಗಡಿ ತೆರವು ಮಾಡುವ ಮುನ್ನ ಮೂರು ನೋಟಿಸ್‌ ಜಾರಿ ಮಾಡಬೇಕಿತ್ತು. 114 ಅಂಗಡಿಗಳನ್ನು ತೆರವು ಮಾಡುವುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಕೂಡ ತಂದಿಲ್ಲ. ಪೊಲೀಸರನ್ನು ಮುಂದಿಟ್ಟುಕೊಂಡು ಕಟ್ಟಡ ತೆರವುಗೊಳಿಸಲಾಗಿದೆ ಎಂದರು.

‘ಹುಲ್ಲು ಮಾರುಕಟ್ಟೆಯಲ್ಲಿ ನಗರಸಭೆಗೆ ಆದಾಯ ಬರುವಂತಹ ಜಾಗವಾಗಿತ್ತು. ಈಗ ತೆರವು ಮಾಡಿರುವ ಜಾಗ ತೋರಿಸಿ ಬ್ಯಾಂಕ್‌ನಲ್ಲಿ ₹50 ಕೋಟಿ ಸಾಲ ಪಡೆಯಲು ಈ ಕೃತ್ಯ ಎಸಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಈ ಜಾಗದಲ್ಲಿ ಅಂಗಡಿ ಮೂಲಕ ಜೀವನ ನಡೆಸುತ್ತಿದ್ದ ಸಣ್ಣ ವರ್ತಕರ ಸ್ಥಿತಿ ಏನು? ಅವರಿಗೆ ಪರ್ಯಾಯ ಜಾಗ ಏಕೆ ತೋರಿಸಿಲ್ಲ. ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಶಾಸಕಿ ರೂಪಕಲಾ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜ್ಯೋತಿಬಸು ಮಾತನಾಡಿ, ‘ನಗರಸಭೆ ವರ್ತಕರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಕ್ಷೇತ್ರದಲ್ಲಿ ಬೇನಾಮಿ ಆಡಳಿತ ನಡೆಸುತ್ತಿರುವ ವ್ಯಕ್ತಿಯೊಬ್ಬರ ಕುಟುಂಬದ ಸದಸ್ಯರು ಆಸ್ಪತ್ರೆ ಕಟ್ಟಲು ನಗರಸಭೆ ಜಾಗವನ್ನು ಬಳಸಿಕೊಳ್ಳಲು ಹುನ್ನಾರ ನಡೆಸಲಾಗಿದೆ’ ಎಂದು ಆರೋಪಿಸಿದರು.

ನಗರಸಭೆ ಕಾಯ್ದೆ ಪ್ರಕಾರ ಸ್ಲಾಟರ್‌ ಹೌಸ್‌ ನಿರ್ಮಾಣ ಮಾಡಬೇಕಾಗಿದೆ. ಹಾಗಾಗಿ ನಗರಸಭೆ ಆಡಳಿತಾಧಿಕಾರಿ ಮಧ್ಯ ಪ್ರವೇಶಿಸಿ ಹುಲ್ಲು ಮಾರುಕಟ್ಟೆ ಮತ್ತು ಸ್ಲಾಟರ್‌ ಹೌಸ್‌ ವಿವಾದ ಬಗೆಹರಿಸಬೇಕು. ಇಲ್ಲದಿದ್ದರೆ ಸೇವ್‌ ಕೆಜಿಎಫ್‌ ಸಮಿತಿ ನ್ಯಾಯಾಲಯದ ಮೊರೆ ಹೋಗುವುದು  ಅನಿವಾರ್ಯ ಎಂದರು.

ಹುಲ್ಲು ಮಾರುಕಟ್ಟೆಯಿಂದ ನಗರಸಭೆಗೆ ಒಂದೂವರೆ ಕೋಟಿ ಅಂಗಡಿ ಬಾಡಿಗೆ ಬಾಕಿ ಇತ್ತು. ಈಗ ಅಂಗಡಿ ತೆರವಿನಿಂದ ಬಾಕಿ ಹಣ ವಸೂಲಿ ಮಾಡಲು ಸಾಧ್ಯವಿಲ್ಲ. ಎಂ.ಜಿ.ಮಾರುಕಟ್ಟೆಯ ಒಂದು ಭಾಗವನ್ನು ಕೂಡ ತೆರವು ಮಾಡಲು ಯತ್ನ ನಡೆಸಲಾಗುತ್ತಿದೆ. ಸುಮಾರು 1,800 ಅಂಗಡಿಗಳಿರುವ ಮಾರುಕಟ್ಟೆ ಸುಮಾರು ಹತ್ತು ಸಾವಿರ ಮಂದಿ ಜೀವನೋಪಾಯಕ್ಕೆ ದಾರಿಯಾಗಿದೆ. ಈ ನಿಟ್ಟಿನಲ್ಲಿ ವರ್ತಕರನ್ನು ಬೆದರಿಸುವ ಕೆಲಸ ಆಗುತ್ತಿದೆ ಎಂದು ದೂರಿದರು.

ಹುಲ್ಲು ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣ ಮಾಡಲು ಬೇಕಾದ ಅನುದಾನ ತಂದಿಲ್ಲ. ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವ ತಯಾರು ಮಾಡಿಲ್ಲ. ನಗರದ ಮಧ್ಯಭಾಗದಲ್ಲಿರುವ 2.25 ಎಕರೆ ಜಮೀನನ್ನು ಬಂಡವಾಳ ಶಾಹಿಗಳಿಗೆ ನೀಡಿ, ಬಡ ವರ್ತಕರನ್ನು ಬೀದಿಗೆ ತಳ್ಳುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.